ADVERTISEMENT

ಮೈಸೂರು | ಪ್ರಾರ್ಥನೆಯಿಂದಲ್ಲ, ಹೋರಾಟದಿಂದ ಪರಿಹಾರ: ಮೀನಾಕ್ಷಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:59 IST
Last Updated 26 ಅಕ್ಟೋಬರ್ 2025, 7:59 IST
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಸುಬ್ಬರಾಯನ ಕೆರೆಯಲ್ಲಿ ಶನಿವಾರ ಆಯೋಜಿಸಿದ್ದ 11ನೇ ವರ್ಷದ ಜಿಲ್ಲಾ ಸಮ್ಮೇಳನದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಸಂಘಟನೆ ಮುಖಂಡರು ಭಾಗವಹಿಸಿದ್ದರು
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಸುಬ್ಬರಾಯನ ಕೆರೆಯಲ್ಲಿ ಶನಿವಾರ ಆಯೋಜಿಸಿದ್ದ 11ನೇ ವರ್ಷದ ಜಿಲ್ಲಾ ಸಮ್ಮೇಳನದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಸಂಘಟನೆ ಮುಖಂಡರು ಭಾಗವಹಿಸಿದ್ದರು   

ಮೈಸೂರು: ‘ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಬದಲಿಗೆ ರಸ್ತೆಗಿಳಿದು ಒಗ್ಗಟ್ಟಾಗಿ ಹೋರಾಡಬೇಕು’ ಎಂದು ಸಿಟಿಐಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿಯು ಇಲ್ಲಿನ ಸುಬ್ಬರಾಯನಕೆರೆಯಲ್ಲಿ ಶನಿವಾರ ಆಯೋಜಿಸಿದ್ದ 11ನೇ ವರ್ಷದ ಜಿಲ್ಲಾ ಸಮ್ಮೇಳನದ ಕಾರ್ಮಿಕರ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಅಮೆರಿಕದಲ್ಲಿ ಟ್ರಂಪ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಭಾರತದಲ್ಲಿ ಕೆಲವರು ಅವರ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದರು. ಆದರೆ ಈಗ ಅವರು ಸುಂಕದ ಹೆಸರಿನಲ್ಲಿ ಭಯಪಡಿಸುತ್ತಿದ್ದಾರೆ. ಅವರನ್ನು ಎದುರಿಸುವ ಸಾಮರ್ಥ್ಯ ನಮ್ಮ ಪ್ರಧಾನಿಗಿಲ್ಲ. ದೇಶದ ಸ್ವಾವಲಂಬನೆಗೆ ತೊಂದರೆಯಾದಾಗಲೂ, ಕೇಂದ್ರ ಸರ್ಕಾರವು ಸಾಮ್ರಾಜ್ಯಶಾಹಿ ನೀತಿ ಎದುರಿಸುವ ಕೆಲಸ ಮಾಡಿಲ್ಲ. ಅಂತಹ ಧೈರ್ಯವಿರುವುದು ಕೆಂಬಣ್ಣದ ಬಾವುಟ ಹಿಡಿಯುವವರಿಗಷ್ಟೇ’ ಎಂದರು.

ADVERTISEMENT

ಇದು ದೇಶಪ್ರೇಮ:  ‘ದೇಶಕ್ಕೆ ಭವಿಷ್ಯದಲ್ಲಿ ಮಾರಕವಾಗುವ ಯೋಜನೆ ಗಳನ್ನು ಪ್ರತಿಭಟಿಸಬೇಕು. ಧರ್ಮಗಳ ವಿರುದ್ಧ ಮಾತಾಡುವುದು ದೇಶ ಪ್ರೇಮವಲ್ಲ, ದೇಶದ ಹಿತಕ್ಕಾಗಿ ಶ್ರೀಮಂತ ರಾಷ್ಟ್ರದ ವಿರುದ್ಧ ಮಾತನಾಡುವುದು ದೇಶಪ್ರೇಮ. ಕೆಲಸದ ಭದ್ರತೆ, ಕೃಷಿ ಕೂಲಿ ಕಾರ್ಮಿಕರಿಗೆ ಮಾರಕವಾಗುವ ನೀತಿಗಳ ವಿರುದ್ಧ ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದರು.

‘ಬಂಡವಾಳಗಾರರಿಗೆ ವಿನಾಯಿತಿ ನೀಡಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ತೈವಾನ್‌ ಮೂಲದ ಫಾಕ್ಸ್‌ಕಾನ್ ಸಂಸ್ಥೆಯು ಆ್ಯಪಲ್‌ ಫೋನ್‌ ಉತ್ಪಾದನಾ ಘಟಕ ತೆರೆದಿದ್ದು, ₹36 ಸಾವಿರ ಕೋಟಿ ಬಂಡವಾಳ ಹೂಡಿದೆ. ಇದರಿಂದ 30ಸಾವಿರ ಉದ್ಯೋಗ ಸೃಷ್ಟಿಯಾಗಿದೆ, ಇದು ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ವಾಸ್ತವದಲ್ಲಿ ಅಲ್ಲಿ ಯಾರಿಗೂ ಕಾಯಂ ಉದ್ಯೋಗ ದೊರೆತಿಲ್ಲ. ಬದಲಿಗೆ, ಸರ್ಕಾರದ ಬೊಕ್ಕಸದಿಂದ ₹16ಸಾವಿರ ಕೋಟಿ ಪ್ರೋತ್ಸಾಹಧನ ನೀಡಲಾಗಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ವಾರ್ಷಿಕವಾಗಿ ₹2.45 ಕೋಟಿಯನ್ನು ಕಾರ್ಪೊರೇಟ್‌ ಕಂಪೆನಿಗಳಿಗೆ ಧಾರೆ ಎರೆಯುತ್ತದೆ. ಹೀಗಾದಾಗ ಆರ್ಥಿಕತೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ, ಜನರಿಗೆ ಯೋಜನೆ ನೀಡುವಾಗ ಆರ್ಥಿಕ ಬಿಕ್ಕಟ್ಟು ಎನ್ನುತ್ತಾರೆ. ರಾಜಕೀಯದ ಈ ದ್ವಂದ್ವ ಕೊನೆಯಾಗಬೇಕು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಸುನಂದಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ವಿಕ್ರಾಂತ್ ಟೈಯರ್ಸ್‌ ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಜಯರಾಮ್, ಖಜಾಂಚಿ ಅಣ್ಣಪ್ಪ ಇದ್ದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಂಡವಾಳಶಾಹಿಗಳ ಅಕ್ರಮ ಸಕ್ರಮಗೊಳಿಸುವ ಕೆಲಸ ಮಾಡುತ್ತಿವೆ
ಮೀನಾಕ್ಷಿ ಸುಂದರಂ ಸಿಟಿಐಯು ರಾಜ್ಯ ಪ್ರಧಾನ ಕಾರ್ಯದರ್ಶಿ

ಮೆರವಣಿಗೆ: ನೂರಾರು ಕಾರ್ಮಿಕರು ಭಾಗಿ ಸಿಐಟಿಯು ಸಮ್ಮೇಳನ ಭಾಗವಾಗಿ ನಗರದ ಗನ್‌ಹೌಸ್ ಬಳಿಯಿಂದ ಸುಬ್ಬರಾಯನಕೆರೆ ಮೈದಾನಕ್ಕೆ ನೂರಾರು ಕಾರ್ಮಿಕರು ಮೆರವಣಿಗೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಕೆಂಪು ದಿರಿಸು ಧರಿಸಿದ್ದ ಕಾರ್ಮಿಕರು ಕ್ರಾಂತಿಯ ಕಹಳೆ ಊದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.