ಮೈಸೂರು: ‘ಭಾರತ ಯುವ ಜನರ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದ್ದು, ಹಿರಿಯರ ಸಲಹೆ ಇಲ್ಲದೆ ನಾವು ಕೆಲಸ ಮಾಡುವುದಿಲ್ಲ. ಇದು ಭಾರತದ ಪರಂಪರೆಯ ವಿಶೇಷ. ಹಿರಿಯರಿಗೆ ಗೌರವಯುತ ಬದುಕು ಕಲ್ಪಿಸಿಕೊಡುವುದು ನಮ್ಮ ಕರ್ತವ್ಯ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಹಿರಿಯ ನಾಗರಿಕ ಮಂಡಳಿ ಮತ್ತು ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯು ಶನಿವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಹಿರಿಯರ ಹೋರಾಟ, ಬಲಿದಾನದಿಂದ ನಾವು ಸುಖಿ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ಅವರಿಗೆ ಚಿರಋಣಿಯಾಗಿರಬೇಕು. ಅವರ ಮಾರ್ಗದರ್ಶನ ಇಲ್ಲದಿದ್ದರೆ ಯುವ ಸಮೂಹ ತಪ್ಪು ದಾರಿ ಹಿಡಿಯುವ ಸಾಧ್ಯತೆಯಿದ್ದು, ಸಮಾಜದ ಸ್ವಾಸ್ಥ್ಯಕ್ಕಾಗಿ ಹಿರಿಯ ನಾಗರಿಕರು ಸದಾ ಸಲಹೆ ನೀಡುತ್ತಿರಬೇಕು. ಅದನ್ನು ಸ್ವೀಕರಿಸುವ ಮನಸ್ಸು ಯುವ ಸಮುದಾಯಕ್ಕಿರಬೇಕು’ ಎಂದು ಹೇಳಿದರು.
‘ಭಾರತದ ಸಂಸ್ಕೃತಿಯಲ್ಲೇ ಹಿರಿಯರಿಗೆ ಗೌರವ ನೀಡಬೇಕು ಎಂಬ ವಿಚಾರ ಅಡಕವಾಗಿದೆ. ದೇಶಕ್ಕೆ ಭವ್ಯ ಇತಿಹಾಸವನ್ನು ನೀಡಿದ್ದಾರೆ. ಅದನ್ನು ಯುವ ಸಮೂಹವೂ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಚಿಗುರು ಆಶ್ರಮದ ಸಂಸ್ಥಾಪಕಿ ಸುಷ್ಮಾ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದವರನ್ನು ಅಭಿನಂದಿಸಲಾಯಿತು.
ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್, ಹಿರಿಯ ನಾಗರಿಕ ಮಂಡಳಿ ಅಧ್ಯಕ್ಷ ಎಚ್.ಎಂ.ನಾಗರಾಜ್, ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ವಿ.ಗೌಡಪ್ಪ, ಕಾರ್ಯದರ್ಶಿ ಎಸ್.ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.