
ಮೈಸೂರು: ‘ವಿದ್ಯಾರ್ಥಿನಿಯರು ಹತ್ತಾರು ಅಡೆತಡೆಗಳನ್ನು ಲೆಕ್ಕಿಸದೇ ಗುರಿಯೊಂದಿಗೆ ಮುನ್ನಡೆದರೆ ಖಂಡಿತ ಯಶಸ್ಸು ಸಿಗಲಿದೆ’ ಎಂದು ಚಿತ್ರನಟ ಝೈದ್ ಖಾನ್ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಮಂಗಳವಾರ ಕಾಲೇಜಿನ ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್, ಎನ್.ಸಿ.ಸಿ ರೇಂಜರ್ಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾರಿಯರಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಹೆಣ್ಣು ಮಕ್ಕಳು ಸಾಧನೆ ಹಾದಿಯಲ್ಲಿ ಸಾಗಬೇಕು. ಯಾರಿಗೂ ಹೆದರದೇ, ಗುರಿಗಳನ್ನಿಟ್ಟುಕೊಂಡು ಮುನ್ನುಗ್ಗಬೇಕು. ಅಸಾಧ್ಯವಾಗಿರುವುದು ಬದುಕಿನಲ್ಲಿ ಯಾವುದೂ ಇಲ್ಲ’ ಎಂದು ವಿದ್ಯಾರ್ಥಿನಿಯರನ್ನು ಹುರಿದುಂಬಿಸಿದರು.
ಇದೇ ವೇಳೆ ತಮ್ಮ ಸಿನಿಮಾ ಡೈಲಾಗ್ ಹೇಳಿ ಝೈದ್ ಖಾನ್ ಎಲ್ಲರನ್ನು ರಂಜಿಸಿದರು. ‘ಬನಾರಸ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿನಿಯರ ಮನಸೂರೆಗೊಳಿಸಿದರು.
ಬಳಿಕ ಗಾಯಕ ಅಕ್ಷಯ್ ಅವರು ತಮ್ಮ ಸಂಯೋಜನೆಯ ಹಾಡುಗಳನ್ನು ಹಾಡಿದರು.
ನಟ ನಿರಂಜನ್, ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯ ಬಸವರಾಜು, ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಂ.ಎಸ್ ಅನಿತಾ, ಐಕ್ಯೂಎಸಿ ಸಂಚಾಲಕಿ ಪ್ರಿಯಾ ಉತ್ತಯ್ಯ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಕೆ.ಎಸ್ ಭಾಸ್ಕರ್, ಖಜಾಂಚಿ ಟಿ.ನಾಗವೇಣಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.