ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೋಮವಾರ ಪುನರಾರಂಭಗೊಂಡಿದ್ದು, ಮೊದಲ ದಿನ 216 ಪ್ರವಾಸಿಗರು ವೀಕ್ಷಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು 50 ಟಿಕೆಟ್ ಖರೀದಿಸಿ ತಮ್ಮ ಜತೆಯಲ್ಲಿದ್ದ ಶಾಸಕರು, ಸಂಸದರು, ಬೆಂಬಲಿಗರಿಗೆ ನೀಡಿದರು.
‘ಈ ಹಿಂದೆ ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಜೂನ್ 9ರ ಮಂಗಳವಾರವೂ ಮೃಗಾಲಯ, ಕಾರಂಜಿ ಉದ್ಯಾನ ತೆರೆದಿರಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ತೆರೆದ ಅರಮನೆ: ಮೈಸೂರು ಅರಮನೆಯೂ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಗೊಂಡಿದ್ದು, ಮೊದಲ ದಿನ ಕೇವಲ 58 ಮಂದಿ ವೀಕ್ಷಿಸಿದರು.
ಸಫಾರಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ, ನಾಗರಹೊಳೆ, ದಮನಕಟ್ಟೆ, ಅಂತರಸಂತೆ ಸಫಾರಿ ಕೇಂದ್ರ ಆರಂಭಗೊಂಡಿದ್ದು, 35 ಜನರು ಸಫಾರಿ ಮಾಡಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಿಗ್ಗೆ 11 ಜನರು, ಮಧ್ಯಾಹ್ನ 36 ಮಂದಿ ಸಫಾರಿಗೆ ತೆರಳಿ ವನ್ಯಜೀವಿಗಳನ್ನು ವೀಕ್ಷಿಸಿದರು. ರಂಗನತಿಟ್ಟು ಪಕ್ಷಿಧಾಮಕ್ಕೆ ಬೆರಳೆಣಿಕೆ ಪ್ರವಾಸಿಗರು ಭೇಟಿ ನೀಡಿದರು.
₹ 3.23 ಕೋಟಿ ದೇಣಿಗೆ
ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ನೆರವಿಗಾಗಿ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಗೆಳೆಯರ ಬಳಗದಿಂದ, ಹಂತ ಹಂತವಾಗಿ ಒಟ್ಟು ₹ 3.23 ಕೋಟಿ ದೇಣಿಗೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಮೇರು ನಟರಾದ ರಾಜ್ಕುಮಾರ್, ಅಂಬರೀಷ್ ಹಾಗೂ ವಿಷ್ಣುವರ್ಧನ್ ಹೆಸರಿನಲ್ಲಿ ಎರಡು ಆನೆಗಳು ಹಾಗೂ ಒಂದು ಸಿಂಹವನ್ನು ಸಚಿವರು ದತ್ತು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.