ಮೈಸೂರು: ‘ಮೈಸೂರು ವಿ.ವಿ.ಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಬಳಸಿದ್ದನ್ನು ಪ್ರೇರಣೆಯಾಗಿಸಿಕೊಂಡ, ಪಂಜಾಬ್ ವಿಶ್ವವಿದ್ಯಾನಿಲಯದ ಕುಲಪತಿ ಇದೀಗ ಪಂಜಾಬ್ ವಿ.ವಿ.ಯಲ್ಲಿ ಪಂಜಾಬಿ ಭಾಷೆ ಬಳಸುತ್ತಿದ್ದಾರೆ’ ಎಂದು ಪ್ರೊ.ಪ್ರಧಾನ ಗುರುದತ್ತ ಹೇಳಿದರು.
ಭಾರತ ದಾರ್ಶಿತ್ವ ಟ್ರಸ್ಟ್, ಸರ್ವಜನ ಮಹಿಳಾ ಹಿತರಕ್ಷಣಾ ವೇದಿಕೆ, ಆರೋರ ಎಜುಕೇಶನ್ ಟ್ರಸ್ಟ್ ವತಿಯಿಂದ ನಗರದ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ನಡೆದ ‘ರಾಜರ್ಷಿ ನಾಲ್ವಡಿ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾಲ್ವಡಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಡೀ ದೇಶಕ್ಕೆ ಮಾದರಿಯಾಗಿವೆ’ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಂ.ರಾಮಯ್ಯ, ಪತ್ರಕರ್ತ, ವಿಮರ್ಶಕ ಹಾಗೂ ನಾಟಕಕಾರ ರವೀಂದ್ರ ಜೋಷಿ ಅವರಿಗೆ ‘ರಾಜರ್ಷಿ ನಾಲ್ವಡಿ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು.
ಜನಪದ ಕಲಾವಿದ ಪುಟ್ಟೇಗೌಡ, ಭಾರತ ದರ್ಶಿತ್ವ ಟ್ರಸ್ಟ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಡಾ.ಎಂ.ಕನ್ನಿಕಾ, ಸರ್ವಜನ ಮಹಿಳಾ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ಯಶೋಧಾ ನಾರಾಯಣ್, ಆರೋರಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಮಿತಾ ಸುಬ್ಬಯ್ಯ, ಡಾ.ಶಿವಾನಂದ, ಶಿವರಾಂ, ಚಂದ್ರೇಗೌಡ, ಬಲರಾಂ, ಸೋಮಶೇಖರ್, ಕೃಷ್ಣೇಗೌಡ, ಜಿ.ಪ್ರಕಾಶ್, ಪ್ರಭಾಕರ್, ದೇವರಾಜ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.