ಬೆಂಗಳೂರು: 'ವಿದ್ಯಾರ್ಥಿಗಳು ಈ ಶತಮಾನದ ಅಗತ್ಯಗಳಾದ ಕೌಶಲ ಹೆಚ್ಚಿಸಿಕೊಳ್ಳುವುದರೊಂದಿಗೆ ಭವಿಷ್ಯಕ್ಕೆ ಭಾಷ್ಯ ಬರೆಯುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಹೊಸ ಸಂಶೋಧನೆಗಳು, ಸೃಜನಶೀಲ ಚಿಂತನೆ, ಕ್ರಿಯಾಶೀಲ ಕಲಿಕೆ, ವಿಮರ್ಶಾತ್ಮಕ ಆಲೋಚನೆ, ತಾಂತ್ರಿಕ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು' ಎಂದು ಆರ್.ವಿ.ವಿಶ್ವವಿದ್ಯಾಲಯದ ಕುಲಪತಿ ವೈ.ಎಸ್.ಆರ್.ಮೂರ್ತಿ ಹೇಳಿದರು.
ಜಯನಗರದ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
'ಕೋವಿಡ್ನಿಂದ ಕಲಿಕೆ ಮತ್ತು ಉದ್ಯೋಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಅದನ್ನು ನಿಭಾಯಿಸುವ ಬುದ್ಧಿಮತ್ತೆ ಮನುಷ್ಯನ ವಿವೇಕಯುತ ಸಾಮರ್ಥ್ಯವನ್ನು ಅವಲಂಬಿಸಿದೆ. ಕೃತಕ ಬುದ್ಧಿಮತ್ತೆಯ ಉಪಯೋಗದೊಂದಿಗೆ ಭವಿಷ್ಯದ ಬದಲಾವಣೆಗಳಿಗೆ ಹೊಂದಿಕೊಂಡು ಹೆಜ್ಜೆ ಇಡಬೇಕು' ಎಂದರು.
ಘಟಿಕೋತ್ಸವದಲ್ಲಿ ಎನ್ಎಂಕೆಆರ್ವಿ ಮಹಿಳಾ ಕಾಲೇಜಿನ ಒಟ್ಟು 609 ವಿದ್ಯಾರ್ಥಿನಿಯರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 548 ವಿದ್ಯಾರ್ಥಿನಿಯರು ಪದವಿ ಹಾಗೂ 61 ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎನ್ಎಂಕೆಆರ್ವಿ ಕಾಲೇಜು ಪ್ರಾಂಶುಪಾಲರಾದ ಸ್ನೇಹಲತಾ ನಾಡಿಗೇರ್, ಉಪಪ್ರಾಂಶುಪಾಲರಾದ ವಸಂತವಲ್ಲಿ, ಟ್ರಸ್ಟಿ ಎಂ.ಕೆ.ದತ್ತರಾಜ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.