ADVERTISEMENT

ಅಕ್ರಮ ನಿವೇಶಗಳ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 6:00 IST
Last Updated 18 ಜನವರಿ 2012, 6:00 IST

ರಾಯಚೂರು: ನಗರದ ಸರ್ವೆ ನಂಬರ್ 1220ರಲ್ಲಿ ಅನುಮೋದನೆಗೊಂಡ ಸತ್ಯನಾಥ ಗೃಹ ನಿರ್ಮಾಣ ಸಹಕಾರ ಸಂಘದ ಸತ್ಯನಾಥ ಬಡಾವಣೆಯಲ್ಲಿ  ಸಾರ್ವಜನಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಸ್ಥಳಗಳಾದ ಉದ್ಯಾನವನ, ಶಾಲೆ ಹಾಗೂ ರಸ್ತೆ ಇತ್ಯಾದಿಗಳಲ್ಲಿ ಸರ್ಕಾರದ ಅನುಮೋದನೆ ಪಡೆಯದೇ ರಚಿತವಾದ ನಿವೇಶನಗಳನ್ನು ತೆರವುಗೊಳಿಸಬೇಕು. ಇದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಅಧಿಕಾರೇತರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬೀಚಣ್ಣ ಗಟ್ಟು ಯಾದವ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ಸಾರ್ವಜನಿಕ ಜಮೀನು ನಿಗಮದ ಅಧ್ಯಕ್ಷರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಸತ್ಯನಾಥ ಬಡಾವಣೆಯು 10-6-1983ರಲ್ಲಿ ಅನುಮೋದನೆಗೊಂಡಿದೆ. ಸರ್ಕಾರದ ನಿಯಮಗಳಿಗೆ ಅನುಸಾರವಾಗಿ   ಸಾರ್ವಜನಿಕ ಸೌಲಭ್ಯಕ್ಕಾಗಿ ಉದ್ಯಾನವನ, ಪ್ರಾಥಮಿಕ ಶಾಲೆ, ಸ್ಮಶಾನಕ್ಕಾಗಿ ಬಿಟ್ಟ ತೆರದ ಸ್ಥಳ (ಜಿ.ಆರ್) ಇತ್ಯಾದಿಗಳಿಗಾಗಿ ಸ್ಥಳ ಕಾಯ್ದಿರಿಸಲಾಗಿದೆ ಎಂದು      ನಿಗಮಕ್ಕೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದ್ದಾರೆ.

ಸತ್ಯನಾಥ ಬಡಾವಣೆಯ ಕಾರ್ಯಕಾರಿ ಮಂಡಳಿಯು 1992-93ರಲ್ಲಿ ವಿನ್ಯಾಸ ನಕ್ಷೆ ಮಾರ್ಪಾಡು ಮಾಡಿದೆ. ಇದರಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆಂದು ಕಾಯ್ದಿರಿಸಿದ  ಸ್ಥಳದಲ್ಲಿ ಎರಡು ನಿವೇಶನಗಳನ್ನು  ಹಾಗೂ ಜಿ.ಆರ್ ಎಂದು ನಮೂದಿಸಿದ ಸ್ಥಳದಲ್ಲಿ ಎರಡು ನಿವೇಶನಗಳನ್ನು ರಚಿಸಿದ್ದಾರೆ. ಈ ರೀತಿ ಪರಿವರ್ತನೆ ಮಾಡಲು ಸರ್ಕಾರದ ಯಾವ ಆದೇಶಗಳೇ ಇರುವುದಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಿಎ ಸೈಟ್‌ಗಳಲ್ಲಿ   ರಚಿಸಿದ ಹೆಚ್ಚುವರಿ ನಿವೇಶನಕ್ಕೆ ಯಾವುದೇ ಅನುಮತಿಯನ್ನು ಪಡೆದಿರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಬೀಚಣ್ಣ ಗಟ್ಟು ಯಾದವ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಕಾನೂನು ಬಾಹಿರವಾಗಿ ಹಾಗೂ ಅನಧಿಕೃತವಾಗಿ ರಚಿತವಾಗಿರುವ ನಿವೇಶನಗಳನ್ನು ಕೂಡಲೇ ತೆರವುಗೊಳಿಸಬೇಕು, ಇದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಅಧಿಕಾರೇತರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬೀಚಣ್ಣ ಗಟ್ಟು ಯಾದವ್ ಅವರು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಅಧ್ಯಕ್ಷರಿಗೆ ಸಲ್ಲಿಸಿದ ಮನವಿಯಲ್ಲಿ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.