ADVERTISEMENT

ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ

ಸಚಿವ ವೆಂಕಟರಾವ್ ನಾಡಗೌಡರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 10:40 IST
Last Updated 16 ಜೂನ್ 2018, 10:40 IST

ಸಿಂಧನೂರು: ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಕಾಯಂಗೊಳಿಸಿ ಉದ್ಯೋಗ ಭದ್ರತೆ ನೀಡುವಂತೆ ಒತ್ತಾಯಿಸಿ ಸರ್ಕಾರಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಸಚಿವ ವೆಂಕಟರಾವ್ ನಾಡಗೌಡರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ 412 ಪದವಿ ಕಾಲೇಜುಗಳಿದ್ದು, 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಅತಿಥಿ ಉಪನ್ಯಾಸಕರ ಬದುಕು ಅತ್ಯಂತ ಶೋಚನಿಯ. ಕಾಯಂಗೊಂಡಿರುವ ಉಪನ್ಯಾಸಕರು 40 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ವೇತನ ಪಡೆಯುತ್ತಾರೆ. ಅವರಷ್ಟೇ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಕೇವಲ ₹ 10 ರಿಂದ ₹ 13 ಸಾವಿರ ವೇತನ ನೀಡಲಾಗುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿರುವ ಇಂದಿನ ಸ್ಥಿತಿಯಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ’ ಎಂದು ಸಂಘದ ಅಧ್ಯಕ್ಷ ಡಾ.ಬಸವರಾಜ.ಬಿ. ನಾಯಕ ಅಳಲು ತೋಡಿಕೊಂಡರು.

ಸೇವಾ ಹಿರಿತನ ಮತ್ತು ವಯೋಮಿತಿ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸಿ  ಸೇವಾ ಭದ್ರತೆ ಒದಗಿಸಬೇಕು, ಪಿಎಚ್‍,ಡಿ, ನೆಟ್, ಕೆಸೆಟ್, ಪದವಿಗಳಿಗೆ ಸಮಾನವಾಗಿ ಎಂ.ಫಿಲ್ ಪದವಿಯನ್ನು ಪರಿಗಣಿಸಿ ಸಮಾನ ವೇತನ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. 2016-17ನೇ ಶೈಕ್ಷಣಿಕ ಸಾಲಿನಲ್ಲಿ ಸೇವೆ ಸಲ್ಲಿಸಿ ಹೊರಗೆ ಉಳಿದ ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ಸಾಲಿನಲ್ಲಿ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ADVERTISEMENT

ಸಂಘದ ಮುಖಂಡರಾದ ನಾರಾಯಣ ಬೆಳಗುರ್ಕಿ, ಡಾ. ಹುಸೇನಪ್ಪ ಅಮರಾಪೂರ, ಪರಶುರಾಮ ಮಲ್ಲಾಪೂರ, ರಾಮಣ್ಣ ಬೇರಿಗಿ, ರವಿ ಸಾಸಲಮರಿ,

ವಿಶ್ವನಾಥ, ಚನ್ನಮಲ್ಲು, ರಾಜಾ, ಬಸವರಾಜ ಕಾರವಾರ, ರೋಶನ್ , ಸಿದ್ದರಾಮೇಶ . ನೀಲಕಂಠ, ಅಮರೇಶ, ಪಿ. ಅಮರೇಶ ಬೆಳ್ಳಿಗನೂರು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.