ADVERTISEMENT

ಎಲ್ಲೆಡೆ ಸಂಭ್ರಮ,ಸಡಗರದ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 8:47 IST
Last Updated 21 ಅಕ್ಟೋಬರ್ 2017, 8:47 IST

ರಾಯಚೂರು: ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಅಮಾವಾಸ್ಯೆಯ ನಿಮಿತ್ತ ಗುರುವಾರ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

ವಿಶೇಷವೆಂದರೆ ಕೆಲವು ವ್ಯಾಪಾರಿಗಳು ಲಕ್ಷ್ಮೀಪೂಜೆ ನಿಮಿತ್ತ ಜಾಗರಣೆ ಮಾಡುವ ನಂಬಿಕೆ ಈ ಭಾಗದಲ್ಲಿದೆ. ಪೂಜೆಗಾಗಿ ಬಾನಂಗಳದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಬಲಿಪಾಡ್ಯ ನಿಮಿತ್ತ ಶುಕ್ರವಾರದಂದು ಹಬ್ಬದ ಆಚರಣೆ ಇನ್ನೂ ಜೋರಾಗಿತ್ತು. ಮನೆಗಳಲ್ಲಿ ಮತ್ತು ಕೆಲ ಅಂಗಡಿಗಳಲ್ಲಿ ಶುಕ್ರವಾರವೂ ಪೂಜಾ ಕೈಂಕರ್ಯ ನಡೆದವು. ಸಾರ್ವಜನಿಕರು ಹಬ್ಬದ ಆಚರಣೆಯಲ್ಲಿ ತೊಡಗಿದ್ದು, ನಗರದೆಲ್ಲೆಡೆ ಸಂಭ್ರಮ ಮನೆಮಾಡಿದೆ.

ADVERTISEMENT

ದೀಪಾವಳಿ ಹಬ್ಬದ ನಿಮಿತ್ತ ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಜನರು ಬಗೆ ಬಗೆಯ ಸಿಹಿ ಖಾದ್ಯಗಳು ಸವೆದು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ನಗರದ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಪಟಾಕಿಗಳ ಮಳಿಗೆಗಳಲ್ಲಿ ಮಕ್ಕಳು ಹಾಗೂ ಯುವ ಜನತೆ ಪಟಾಕಿಗಳ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು. ಬಾನಾಂಗಳದಲ್ಲಿ ಪಟಾಕಿಗಳ ಚಿತ್ತಾರ, ಭಾರೀ ಶಬ್ದ ಹೊಮ್ಮಿಸುವ ಪಟಾಕಿಗಳನ್ನು ಸಿಡಿಸಿ ಜನತೆ ಸಂಭ್ರಮಿಸಿದರು.

ನಗರದ ಮಾರುಕಟ್ಟೆಯು ಒಂದು ವಾರದಿಂದ ಪೂಜಾ ಸಾಮಗ್ರಿಗಳ ಮಾರಾಟ ನಡೆದಿದ್ದು, ಜನದಟ್ಟಣೆ ಹೆಚ್ಚಿದೆ.ಬಾಳೆ, ಮಾವಿನ ಎಲೆ, ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಬಂಗಿ ಕುಂಟಾ ಪ್ರದೇಶದಲ್ಲಿ, ಬಟ್ಟೆ ಬಜಾರ್‌ನಲ್ಲಿ ವ್ಯಾಪಾರವು  ಚುರುಕಿನಿಂದ ನಡೆದಿದೆ. ದೀಪಾವಳಿಯಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಸಂಭ್ರಮ ಆಚರಿಸುವಂತಾಗಿದೆ ಎಂದು ನಿಜಲಿಂಗಪ್ಪ ಕಾಲೊನಿ ನಿವಾಸಿ ವೆಂಕಟೇಶಾಚಾರ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.