ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 10:15 IST
Last Updated 14 ಫೆಬ್ರುವರಿ 2011, 10:15 IST

ಕುಕನೂರು: ತಾಲ್ಲೂಕು ಯುನಿಸೆಫ್ ಆಶ್ರಯದಲ್ಲಿ ಸಮೀಪದ ಮಂಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಮಿತ್ತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಹಿರೇಬೀಡ್ನಾಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಫ್.ಸಂಗಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆಯಲು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಬೇಕಾಗಿದ್ದು ಅನಿವಾರ್ಯವಾಗಿದೆ.ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಕೀಳರಿಮೆಯನ್ನು ಹೋಗಲಾಡಿಸಲು ಶಿಕ್ಷಕರು ಹಾಗೂ ಪಾಲಕರು ವಿಶೇಷ ಕಾಳಜಿ ವಹಿಸುವುದರ ಜೊತೆಗೆ ನಿರಂತರವಾಗಿ ಎಲ್ಲಾ ವಿಷಯಗಳ ಅಧ್ಯಯನ ಮಾಡಿಸಿದಲ್ಲಿ ಮಕ್ಕಳು ಹೆಚ್ಚಿನ ಅಂಕ ಪಡೆದು ತೇರ್ಗಡೆ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪ ಪ್ರಾಚಾರ್ಯ ಕುಮಾರ ಎ.ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯಕ್ರಮದಂತೆ ಶಿಕ್ಷಕರು ಈಗಾಗಲೇ ಬೋಧನೆ ಮಾಡಿದಾಗ್ಯೂ ಕೂಡ, ಕಠಿಣ ಪಾಠಗಳನ್ನು ಪುನರಾವರ್ತನೆಯ ಜತೆಗೆ ಆಗಿಂದಾಗ್ಗೆ ಪರೀಕ್ಷೆಗಳನ್ನು ನಿಗದಿಗೊಳಿಸಬೇಕು ಎಂದು ಅವರು ಶಿಕ್ಷಕರಿಗೆ ಸಲಹೆ ನೀಡಿದರು.ಯುನಿಸೆಫ್ ತಾಲ್ಲೂಕು ಸಂಯೋಜಕ ಕಲ್ಲಪ್ಪ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಸಂಯೋಜಕ ಶಿವಪ್ಪ ಬಿಸನಳ್ಳಿ, ಸಮುದಾಯ ಸಂಘಟಕ ಶಿವಯ್ಯ ಸಸಿಮಠ, ಮಂಜುನಾಥ ಪಾಟೀಲ ಇತರರು ವೇದಿಕೆಯಲ್ಲಿ ಇದ್ದರು.ಚಂದ್ರಶೇಖರ್, ಕೃಷ್ಣಮೂರ್ತಿ ಭಟ್, ಜಗನ್ನಾಥ ಬಿಸರಳ್ಳಿ, ಸ್ವಾಮಿ ಟಿ.ಡಿ ಶಿಕ್ಷಕರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ದೈಹಿಕ ಶಿಕ್ಷಕ ಶರಣಪ್ಪ ವೀರಾಪೂರ ನಿರೂಪಿಸಿದರು. ಶಿಕ್ಷಕಿ ಶೈಲಜಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.