ADVERTISEMENT

ಕನ್ನಡಿಗರ ಬದುಕು ಹಸನು ಮಾಡಲು ನನ್ನನ್ನು ಬೆಂಬಲಿಸಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:15 IST
Last Updated 18 ಫೆಬ್ರುವರಿ 2012, 10:15 IST

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 29ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಹುದ್ದೆಗೆ ತಾವು ಒಬ್ಬ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದು, ಕನ್ನಡ ಕಟ್ಟುವುದಕ್ಕಾಗಿ, ಕನ್ನಡ ಬೆಳೆಸುವುದಕ್ಕಾಗಿ, ಕನ್ನಡಿಗರ ಬದುಕನ್ನು ಹಸನು ಮಾಡುವ ಸಲುವಾಗಿ ಸಾಹಿತಿಗಳು ತಮಗೆ ಮತ ನೀಡಿ ಬೆಂಬಲಿಸಬೇಕು ಎಂದು ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮನವಿ ಮಾಡಿದ್ದಾರೆ.

ಕಳೆದ 14 ವರ್ಷದಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ತಮಗೆ ದೊರಕಿದೆ. 2 ಬಾರಿ ಕಾರ್ಯದರ್ಶಿಯಾಗಿ, 2 ಬಾರಿ ಕೋಶಾಧ್ಯಕ್ಷನಾಗಿ, ನಾಲ್ವರು ಅಧ್ಯಕ್ಷರೊಡನೆ ತಾವು ಸೇವೆ ಸಲ್ಲಿಸಿದ್ದು, ಡಾ.ಸಾ.ಶಿ.ಮರುಳಯ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ, ಪ್ರೊ.ಚಂಪಾ ಹಾಗೂ ನಲ್ಲೂರ ಪ್ರಸಾದ ಅವರ ಅಧ್ಯಕ್ಷ ಅವಧಿಯಲಿ ಗೌರವ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈ ಬಾರಿ ಅಧ್ಯಕ್ಷ ಹುದ್ದೆ ತಾವು ಸ್ಪರ್ಧಿಸಿರುವುದಾಗಿ ಹೇಳಿದ್ದಾರೆ.

ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಬೆಂಗಳೂರು ವಿವಿಯ ಪ್ರಸಾರಾಂಗ ವಿಭಾಗದಲ್ಲಿ ಸಂಯೋಜನಾಧಿಕಾರಿಯಾಗಿ 36 ವರ್ಷ ಸೇವೆ. 2011ರಲ್ಲಿ ನಿವೃತ್ತಿ. 20 ವರ್ಷ ವಿವಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ.  ಹೊಟೆಲ್ ಉದ್ದಿಮೆದಾರರ ಸಹಕಾರ ಬ್ಯಾಂಕ್‌ನ ಅಧ್ಯಕ್ಷನಾಗಿ 20 ವರ್ಷ ಸೇವೆ. ಈ ಬ್ಯಾಂಕ್ ಈಗ ವರ್ಷಕ್ಕೆ 7 ಕೋಟಿ ಲಾಭ ಗಳಿಸುತ್ತಿದೆ ಎಂದು ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಒಳ ಹೊರಗುಗಳ ಬಗ್ಗೆ ಸಂಪೂರ್ಣ ಅರಿವಿರುವ ತಾವು ಕಸಾಪ ಸ್ಥಾಪನೆ ಮೂಲ ಆಶಯಕ್ಕೆ ಧಕ್ಕೆ ಆಗದ ರೀತಿ ಕನ್ನಡ ಕೆಲಸ ಮಾಡುವ ಶಕ್ತಿ ತಮಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಎಲ್ಲ ಭಾಗಗಳ ಬಗ್ಗೆ ಅಪಾರ ಗೌರವವಿದೆ. ಹಿರಿಯ ಸಾಹಿತಿಗಳ ಮಾರ್ಗದರ್ಶನ, ಕಿರಿಯ ಸಾಹಿತಿಗಳ ಒಡನಾಟ,  ಕನ್ನಡಪರ ಸಂಘಟನೆಗಳೊಂದಿಗೆ ಪ್ರೀತಿಯ ಸಂಬಂಧ, ಸಾಹಿತ್ಯ ಪರಿಚಾರಕರ ಬಗ್ಗೆ ಗೌರವ ಹೊಂದಿದ್ದ, ಪರಿಷತ್ತನ್ನು ಜನಪರ ಸಂಸ್ಥೆಯಾಗಿ ಶ್ರಮಿಸಲು ಬದ್ಧರಾಗಿದ್ದು, ತಮಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹವನ್ನು ಕನ್ನಡ ಭಾಷೆ ಬೆಳವಣಿಗೆಯಲ್ಲಿ, ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜನ ಬೆಂಬಲಿಸಬೇಕು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.