ADVERTISEMENT

ಕನ್ನಡ ಸಮ್ಮೇಳನಕ್ಕೆ ಪೂರಕ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:40 IST
Last Updated 4 ಅಕ್ಟೋಬರ್ 2011, 8:40 IST

ಗಂಗಾವತಿ: ನಗರದಲ್ಲಿ ಮುಂದಿನ ನವೆಂಬರ್‌ನಲ್ಲಿ ನಡೆಯಬಹುದಾದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಮಾಧ್ಯಮ ಸ್ನೇಹಿತರು ಲೋಪದೋಷಕ್ಕಿಂತ ಅಗತ್ಯತೆಯ ಮೇಲೆ ಹೆಚ್ಚು ಬೆಳಕು ಚೆಲ್ಲಬೇಕು ಎಂದು ಮಾಧ್ಯಮ ಸಮಿತಿ ಅಧ್ಯಕ್ಷ ಹಾಗೂ ವಾರ್ತಾಧಿಕಾರಿ ವಿ.ಬಿ. ತುಕರಾಂ ಹೇಳಿದರು.

ಎಪಿಎಂಸಿ ಆವರಣದಲ್ಲಿರುವ 78ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿಯಲ್ಲಿ ಸೋಮವಾರ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ನಡೆದ ಮಾಧ್ಯಮ ಸಮಿತಿ ಸಭೆಯಲ್ಲಿ ಮಾತನಾಡಿದರು.  

78ನೇ ಸಮ್ಮೇಳನ ಜಿಲ್ಲೆಗೆ ಬಂದಿರುವುದು ನಮ್ಮೇಲ್ಲರ ಅದೃಷ್ಟ ಮತ್ತು ಹೆಮ್ಮೆಯ ವಿಷಯ. ಸಮ್ಮೇಳನ ಆಯೋಜಿಸುವುದು ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಇಂಥ ಕಾರ್ಯದಲ್ಲಿ ಸಣ್ಣಾಪುಟ್ಟ ಲೋಪದೋಷ ಸಹಜ.

ಆದರೆ ಮಾಧ್ಯಮಗಳು ಸಣ್ಣ ಲೋಪಗನ್ನೇ ವೈಭವೀಕರಿಸುವುದಕ್ಕಿಂತ ಸಮ್ಮೇಳನದ ಯಶಸ್ಸಿಗೆ ಪೂರಕವಾದ ವಸ್ತುವಿಷಯದ ಮೇಲೆ ಬೆಳಕು ಚಲ್ಲಿದರೆ, ಸಮ್ಮೇಳನದ ಯಶಸ್ವಿಗೆ ಮಾಧ್ಯಮಗಳು ಕೊಡುಗೆ ನೀಡಿದಂತಾಗುತ್ತದೆ ಎಂದರು.

ಸಮ್ಮೇಳನದ ಮಾಹಿತಿ ಬಿತ್ತರಿಸಲು ರಾಜ್ಯದ ನಾನಾ ಮೂಲೆಗಳಿಂದ ಸುಮಾರು 250ಕ್ಕೂ ಹೆಚ್ಚು  ಮಾಧ್ಯಮ ಪ್ರತಿನಿಧಿಗಳು ಬರುವ ನಿರೀಕ್ಷೆಯಿದೆ. 65ಕ್ಕೂ ಹೆಚ್ಚು ಕಂಪ್ಯೂಟರ್ ಬೇಕಾಗಬಹುದು. ಸುಸಜ್ಜಿತ ಮಾಧ್ಯಮ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ, ಸಮ್ಮೇಳನದ ಮುಖ್ಯ ಭಾಗವಾದ ಆಹಾರ ಮತ್ತು ವಸತಿಗೆ ಸೂಕ್ತ ಏರ್ಪಾಡು ಮಾಡಲಾಗಿದೆ. ಒಂದು ವಾರದಲ್ಲಿ `ಮನೆ ಮನೆ ಅತಿಥಿ~ ಕಾರ್ಯಕ್ಕೆ ನಗರದಿಂದ ಚಾಲನೆ ನೀಡಲಾಗುವುದು ಎಂದರು.

ಸಮಿತಿಯ ಉಪಾಧ್ಯಕ್ಷ ವಿ.ಎಸ್. ಪಾಟೀಲ್, ಕಾರ್ಯದರ್ಶಿ ಶರಣಪ್ಪ ಬಾಚಲಾಪುರ, ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಪರಣ್ಣ ಮುನವಳ್ಳಿ, ಸಹ ಕಾರ್ಯದರ್ಶಿ ಬಸವರಾಜ ಕೋಟೆ ಮಾತನಾಡಿದರು. ಎ.ಜಿ. ಕಾರಟಗಿ, ಆರ್.ಎ. ಮೋಹನ್, ಎಸ್.ಬಿ. ಗೊಂಡಬಾಳ ಇದ್ದರು.

ಪತ್ರಕರ್ತರಾದ ವೃಷಬೇಂದ್ರ ಸ್ವಾಮಿ, ಹರೀಶ ಕುಲ್ಕರ್ಣಿ, ರಮೇಶ ನಾಯಕ್, ಬಿ.ಎಂ. ವಿಶ್ವನಾಥ, ಕೆ. ಮಲ್ಲಿಕಾರ್ಜುನ ಸಣಾಪುರ, ಮಹೇಶಗೌಡ, ಪ್ರಸನ್ನ ದೇಸಾಯಿ ಡಿ. ಶ್ರೀನಿವಾಸ, ರಾಮಮೂರ್ತಿ ನವಲಿ, ಇಂಗಳಗಿ ನಾಗರಾಜ್, ವೆಂಕಟೇಶ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.