ADVERTISEMENT

‘ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 5:10 IST
Last Updated 29 ನವೆಂಬರ್ 2017, 5:10 IST

ಸಿಂಧನೂರು: ರಾಯಚೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ವೈಯಕ್ತಿಕವಾಗಿ ವೈಚಾರಿಕ ಭಿನ್ನತೆ ಇದೆಯೇ ಹೊರತು, ಪಕ್ಷದ ವಿಚಾರ ಬಂದಾಗ ಎಲ್ಲ ಮುಖಂಡರು ಒಗ್ಗಟಾಗಿ ನಿಲ್ಲುತ್ತೇವೆ ಎಂದು ರಾಯಚೂರು ಸಂಸದ ಬಿ.ವಿ.ನಾಯಕ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗಾರ ಜತೆ ಮಾತನಾಡಿದ, ‘ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಏನೂ ಇಲ್ಲ. ಕೆಲವರು ಈಚೆಿಗೆ ಪಕ್ಷದ ವೇದಿಕೆಯಲ್ಲಿ ಸಮಾಲೋಚಿಸಬೇಕಾದ ಸಂಗತಿಗಳನ್ನು ಬಹಿರಂಗವಾಗಿ ಮಾಧ್ಯಮಗಳ ಮೂಲಕ ಹೇಳಿರುವ ವಿಷಯ ಗಮನಕ್ಕೆ ಬಂದಿದ್ದು, ಅಂತಹವರಿಗೆ ಈಗಾಗಲೇ ನೋಟಿಸ್ ನೀಡಿ ಎಚ್ಚರಿಸಲಾಗಿದೆ.

ಅಲ್ಲದೆ ಹಿರಿಯ ನಾಯಕರಾದ ಹಂಪನಗೌಡ ಬಾದರ್ಲಿ, ಎನ್.ಎಸ್.ಬೋಸರಾಜು, ಎ.ವಸಂತಕುಮಾರ, ಹಂಪಯ್ಯನಾಯಕ ಸೇರಿದಂತೆ ಜನಪ್ರತಿನಿಧಿಗಳ ಸಮನ್ವಯ ಸಮಿತಿಯನ್ನು ರಚಿಸಲಾಗಿದ್ದು, ತಾವು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಧಿಕಾರ ಬಂದಾಗ ಸಹಜವಾಗಿ ಕೆಲವರಲ್ಲಿ ಭಿನ್ನ ವಿಚಾರಗಳು ಬರುತ್ತವೆ. ವೈಯಕ್ತಿಕ ಪ್ರತಿಷ್ಠೆ ಮತ್ತು ದ್ವೇಷದ ಭಾವನೆ ಯಾರಲ್ಲಿಯೂ ಇಲ್ಲ. ಎಲ್ಲರಲ್ಲೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಯಾವೊಬ್ಬ ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಹೋಗುವ ಸ್ಥಿತಿ ಇಲ್ಲ. ಅಂತಹ ಹೀನಾಯ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಹಾಗೂ ಜನಪ್ರಿಯ ಯೋಜನೆಗಳು ಸಾಮಾನ್ಯ ಜನರ ಮನಸು ಗೆದ್ದಿವೆ. ಎಲ್ಲ ವರ್ಗಗಳ ಜನರ ಹಿತಾಸಕ್ತಿಯನ್ನು ಹೊಂದಿರುವ ಪಕ್ಷ ಕಾಂಗ್ರೆಸ್‌’ ಎಂದು ಸಮರ್ಥಿಸಿಕೊಂಡರು.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂಪಾ ಅವರು ರಾಜಕೀಯದ ವಿಚಾರ ಮಾತನಾಡಿರುವುದು ಅವರ ವ್ಯಕ್ತಿಗತ ಸ್ವಾತಂತ್ರ್ಯ. ಆದರೆ, ಬಿಜೆಪಿಯವರು ದೊಡ್ಡದನ್ನಾಗಿ ಮಾಡಲು ಹೊರಟಿದ್ದಾರೆ. ಏಕೆಂದರೆ ಅವರಿಗೆ ಬೇರೆ ಯಾವುದೇ ವಿಷಯ ಇಲ್ಲ ಎಂದು ಟೀಕಿಸಿದರು. ಮುಖಂಡರಾದ ಶಾಕೀರ್‌ಪಾಷಾ ತುರಕಟ್ಟಿ, ಅಮ್ಜದ್ಅಲಿ, ಕಮಲ್‌ ಕುಮಾರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.