ಲಿಂಗಸುಗೂರ: ಕೃಷ್ಣಾ ಭಾಗ್ಯ ಜಲನಿಗಮದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಸವಳು-ಜವಳು ಭೂ ಪ್ರದೇಶಗಳ ಅಭಿವೃದ್ಧಿಗೆ ಕಾಡಾದಲ್ಲಿ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಅಂತೆಯೆ ಅಧಿಕ್ಷಕ ಎಂಜಿನಿಯರ್ ಹುದ್ದೆ ಸೃಷ್ಟಿಸಿ ಡ್ರೈನೇಜ್ ಸೆಲ್ ಸ್ಥಾಪಿಸುವ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಕೃಷ್ಣಾ ಕಾಡಾ ಅಧ್ಯಕ್ಷ ಬಿ.ಪಿ. ಹಳ್ಳೂರು ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣದ ಕೆಂಬ್ರಿಡ್ಜ್ ಪ್ರಾಥಮಿಕ ಶಾಲೆಗೆ ಖಾಸಗಿ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪ್ರಸ್ತುತ ವರ್ಷ ಕಾಡಾಕ್ಕೆ ರೂ. 150 ಕೋಟಿ ಅನುದಾನ ನೀಡಿದೆ. ಈ ಪೈಕಿ ರೂ. 89ಕೋಟಿ ಹಣವನ್ನು ಸವಳು-ಜವಳು ಭೂ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಕಾರಣ ರೈತರು ಸದ್ಭಳಕೆ ಮಾಡಿಕೊಳ್ಳುವಂತೆ ಕೋರಿದರು.
ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ನೀರಾವರಿ ಸೌಲಭ್ಯ ವಂಚಿತ ಜಮೀನುಗಳಿಗೆ ಸಮರ್ಪಕ ನೀರು ಹರಿಸಲು ಹಾಗೂ ಹೊಲಗಾಲುವೆ ನಿರ್ಮಿಸಲು ರೂ. 45ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಉಳಿದ ಅನುದಾನವನ್ನು ರೈತರಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಲಾಭದಾಯಕ ಬೆಳೆ ಬೆಳೆಯುವ ಕುರಿತು ತರಬೇತಿ, ಪ್ರವಾಸ, ಹೊಲ-ಮನೆ ಸಂಪರ್ಕ ರಸ್ತೆಗಳ ಅಭಿವೃದ್ಧಿ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಕುರಿತಂತೆ ಬಳಸಲಾಗುವುದು ಎಂದು ವಿವರಿಸಿದರು.
ಶರಣಯ್ಯತಾತ ಹುನಕುಂಟಿ, ಶಾಲೆ ಅಧ್ಯಕ್ಷ ಮಹಾಂತೇಶ ಗೌಡರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಮೇಶ ಜೋಷಿ, ಜಿಪಂ ಸದಸ್ಯ ಎಚ್.ಬಿ. ಮುರಾರಿ, ಅಮರೇಶ ಗೌಡರ, ಶರಣಯ್ಯ ಗೊರೆಬಾಳ, ಶಶಿ ಗಸ್ತಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.