ADVERTISEMENT

ಕೃಷಿ ಚಟುವಟಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:10 IST
Last Updated 19 ಜುಲೈ 2012, 9:10 IST
ಕೃಷಿ ಚಟುವಟಿಕೆ ಆರಂಭ
ಕೃಷಿ ಚಟುವಟಿಕೆ ಆರಂಭ   

ದೇವದುರ್ಗ: ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಬೆನ್ನಹಿಂದೆಯೇ ಈ ಬಾರಿ ಮುಂಗಾರು ಮಳೆ ಸಹ ಸಕಾಲಕ್ಕೆ ಆಗಮಿಸಿದೆ ಸುಮಾರು 40 ದಿನಗಳ ನಂತರ ವಿಳಂಬವಾಗಿ ಬಂದರೂ ರೈತರನ್ನು ಸಂತೃಪ್ತಿ ಪಡಿಸಲು ಮಾತ್ರ ಸಾಧ್ಯವಾಗದಿದ್ದರೂ ಅನಿವಾರ್ಯ ಎಂಬುವಂತೆ ಕೃಷಿ ಚಟುವಟಿಕೆಗಳು ಭರದಿಂದ ನಡೆದಿರುವುದು ಕಂಡುಂದಿದೆ.

ತಾಲ್ಲೂಕಿನ ಹಲವಡೆ ಕಳೆದ ಎರಡು ದಿನಗಳಿಂದ ಉತ್ತಮವಾಗಿ ಮಳೆ ಬರತೊಡಗಿದೆ. ವಾಡಿಕೆಯಂತೆ ಈ ಬಾರಿ ಮಳೆ ತೀರ ಕಡಿಮೆ ಬಂದಿದೆ. ಸಕಾಲಕ್ಕೆ ಮಳೆ ಬಂದಿದ್ದರೆ ಸುಮಾರು  60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಬೇಕಾಗಿದ್ದರೂ ಮಳೆಯ ಅಭಾವದಿಂದಾಗಿ ಹತ್ತು ಸಾವಿರ ಹೆಕ್ಟೇರ್ ಸಹ ಬಿತ್ತನೆ ಆಗದೆ ಇರುವುದು ಕೃಷಿ ಇಲಾಖೆಯ ವರದಿ ಹೇಳುತ್ತಿದೆ. ಕಳೆದ 9 ತಿಂಗಳಿಂದ ಮಳೆಯೇ ಇಲ್ಲದ ಕಾರಣ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡು ಬೆಳಗಾದರೆ ರೈತರು ಮಳೆಗಾಗಿ ದಾರಿಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಾಡಿಕೆಯಂತೆ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಯಲ್ಲಿ ಹೆಚ್ಚಾಗಿ ಹೆಸರು, ಸಜ್ಜೆ, ಸೂರ್ಯಕಾಂತಿ, ಶೇಂಗ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಹೆಸರು ಬಿತ್ತನೆ ಮಾಡಲಾಗುತ್ತಿಲ್ಲ ಎಂದು ರೈತ ಬಸ್ಸಪ್ಪ ಎಂಬವರು `ಪ್ರಜಾವಾಣಿ~ಗೆ ತಿಳಿಸಿದರು.

ಈ ಬಾರಿ ಬೇಸಿಗೆಯಲ್ಲಿ ತಾಪಮಾನ 45ರ ಗಡಿ ತಲುಪಿತ್ತು. ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ವಾತಾವರಣ ತಂಪಾಗಿದೆ. ಮುಂಗಾರು ಬಿತ್ತನೆಗೆ ಹಿನ್ನಡೆಯಾದರೂ ಕೆಲವು ರೈತರು ಮಳೆಯನ್ನು ನಂಬಿ ಬಿತ್ತನೆಗೆ ಮುಂದಾದರೆ ಇನ್ನು ಕೆಲವು ರೈತರು ತುಟ್ಟಿ ಬೀಜ ಖರೀದಿಸಿ ಬಿತ್ತನೆ ಮಾಡಬೇಕು ಮಳೆ ಮೇಲೆ ಹೋದರೆ ಸಾಲಕ್ಕೆ ಗುರಿಯಾಗಬೇಕು ಎಂಬ ಭಯದಿಂದ ಹಿಂದೇಟು ಹಾಕಿದ್ದಾರೆ. ಆದರೆ ಎಲ್ಲ ರೈತರು ಮಾತ್ರ ಜಮೀನುಗಳ ಸ್ವಚ್ಛತೆ ಎಡಬಿಡದೆ ಮುಂದಾಗಿರುವುದು ಕಂಡು ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.