ರಾಯಚೂರು: ಗಂಗಾ ಕಲ್ಯಾಣ ವೈಯಕ್ತಿಕ ಕೊಳವೆ ಬಾವಿ ಯೋಜನೆಯಡಿ ಅರ್ಹ ಫಲಾನುಭವಿ ಗುರುತಿಸಿ ನೆರವು ಕಲ್ಪಿಸುವಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಇಲಾಖೆಯು ನಿರ್ಲಕ್ಷ್ಯವಹಿಸಿದೆ. ಇಲಾಖೆ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ( ಮೂರ್ತಿ ಬಣ) ಜಿಲ್ಲಾ ಘಟಕವು ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿತು.
ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಕೊಪ್ಪಳ, ಗುಲ್ಬರ್ಗ, ಬೀದರ್ ಮತ್ತು ಬಳ್ಳಾರಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಯು ಗಂಗಾ ಕಲ್ಯಾಣ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಿಲ್ಲ. ಯೋಜನೆಯಡಿ ಕೃಷಿಕರಿಗೆ ಸೌಲಭ್ಯ ಕಲ್ಪಿಸಿಲ್ಲ. ಕೃಷಿ ಏಳ್ಗೆಗೆ ಪೂರಕವಾಗುವಂಥ ವೈಯಕ್ತಿಕ ಕೊಳವೆ ಬಾವಿ ನಿರ್ಮಾಣ ಮಾಡಿಕೊಳ್ಳಲು ನೆರವು ಕಲ್ಪಿಸಿಲ್ಲ ಎಂದು ಸಂಘಟನೆ ಪ್ರತಿನಿಧಿಗಳು ದೂರಿದರು.
ಫಲಾನುಭವಿಗಳಿಗೆ ಕೊಳವೆ ಬಾವಿ ನಿರ್ಮಿಸಿಕೊಡಲು ಸರ್ಕಾರ ಹೆಚ್ಚಿನ ದರವನ್ನೇ ನಿಗದಿಪಡಿಸಿ ನೆರವು ಕಲ್ಪಿಸುತ್ತಿದೆ. ಆದರೆ ರೈತರ ಜಮೀನಿನಲ್ಲಿ 100-150 ಅಡಿ ಆಳ ಕೊರೆದು 350ರಿಂದ 400 ಅಡಿ ಕೊರೆಯಲಾಗಿದೆ. ನೀರಿಲ್ಲ ಎನ್ನುವುದು. 20-30 ಅಡಿ ಕೇಸಿಂಗ್ ಪೈಪ್ ಅಳವಡಿಸಿ 70-80 ಅಡಿ ಅಳವಡಿಸಲಾಗಿದೆ ಎಂದು ಹೇಳಿ ಸುಳ್ಳು ಬಿಲ್ ಪಾವತಿ ಮಾಡಿ ಸರ್ಕಾರದ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ 203 ವರ್ಷಗಳ ಹಿಂದೆ ಕೊರೆದು ಕೊಳವೆ ಬಾವಿಗಳ ರೈತರಿಗೆ ನಿರೆತ್ತುವ ಮೋಟರ್ ಮತ್ತು ಇನ್ನಿತರ ಸಲಕರಣೆಗಳನ್ನು ಕೂಡ ವಿತರಿಸಬೇಕು, ವಿದ್ಯುತ್ ಸರಬರಾಜು ಕಂಪೆನಿ ನಿಯಮಿತದಿಂದ ಕೊಳವೆ ಬಾವಿಗಳಿಗೆ ವಿದ್ಯುತ್ ಕಂಬ, ತಂತಿ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ, ಜಿಲ್ಲಾ ಅಧ್ಯಕ್ಷ ಜಿ.ಆರ್ ಹನುಮೇಶ ದುಮತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಕರಿಬಿಲ್ಕರ್, ವಿಭಾಗೀಯ ಕಾರ್ಯದರ್ಶಿ ಅಶೋಕ ನಂಜಲದಿನ್ನಿ, ವಿಭಾಗೀಯ ಸಂಘ ಕಾರ್ಯದರ್ಶಿ ಮುಕ್ಕಪ್ಪ ಯತ್ತಗಲ್, ಜಿಲ್ಲಾ ಕಾರ್ಯಾಧ್ಯಕ್ಷ ಜಯರಾಜ ಟೈಗರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.