ರಾಯಚೂರು: ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಮಂತ್ರಾಲಯ ರಸ್ತೆಯಲ್ಲಿರುವ ಆರ್ಟಿಒ ವೃತ್ತದವರೆಗೆ ₹36 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಕಾರ್ಯ 2012–13ರಲ್ಲಿ ನಡೆಯಿತು. ಆಗ ಕಿರಿದಾಗಿದ್ದ ರೈಲು ನಿಲ್ದಾಣದ ರಸ್ತೆಗೂ ಚತುಷ್ಪಥದ ಭಾಗ್ಯ ಬಂತು.
ಆದರೆ, ಈ ರಸ್ತೆಯ ಮಧ್ಯದಲ್ಲಿರುವ ಕುಡಿಯುವ ನೀರಿನ ಪೈಪ್ಲೈನ್ ಸ್ಥಳಾಂತರ ಮಾಡದ ಕಾರಣ ನೀರು ಸೋರಿಕೆಯಿಂದ ರಸ್ತೆ ತುಂಬಾ ಗುಂಡಿಗಳು. ನೀರು ಸೋರಿಕೆಯಾದ ಸ್ಥಳದಲ್ಲಿ ಪದೇ ಪದೇ ದುರಸ್ತಿ ಕಾರ್ಯ ನಡೆಯುತ್ತದೆ. ಇದಕ್ಕೆ ಹಳ್ಳ ತೋಡಲಾಗುತ್ತದೆ. ನೀರು ಸೋರಿಕೆಯಾದಂತೆಲ್ಲ ಹೀಗೆ ತೋಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ.
ನಂತರ ಈ ಹಳ್ಳವನ್ನು ನಂತರ ಸಿಮೆಂಟ್ ಕಾಂಕ್ರಿಟ್ ಹಾಕಿ ಮುಚ್ಚಲಾಗುತ್ತದೆ. ಆದರೆ, ರಸ್ತೆ ಮತ್ತೆ ಎತ್ತರ– ತಗ್ಗು ಉಂಟಾಗಿ ಮಳೆ ನೀರು ಸುಗಮವಾಗಿ ಹರಿಯದೆ ರಸ್ತೆ ಮೇಲೆ ನಿಂತು. ಅಲ್ಲಲ್ಲಿ ಸಣ್ಣ ಗುಂಡಿಗಳು ಆಗುತ್ತವೆ. ವಾಹನ ಸಂಚಾರದ ಒತ್ತಡದಿಂದ ಈ ಗುಂಡಿಗಳ ಆಳ, ಅಗಲ ಹಿಗ್ಗುತ್ತವೆ.
ಈ ರಸ್ತೆ ನಿರ್ಮಾಣವು ಕಳಪೆ ಗುಣಮಟ್ಟ ಎಂದು ಆರೋಪಿಸಿ ಆನಂದ್ ಡಿ.ಶೋತ್ರಿಯಾ, ಡಾ.ಶಂಕರಗೌಡ ಅವರು ಲೋಕಾಯುಕ್ತರಿಗೆ ದೂರು ನೀಡಿರುವ ಕಾರಣ ಲೋಕಾಯುಕ್ತ ತಾಂತ್ರಿಕ ವಿಭಾಗದಿಂದಲೂ ತನಿಖೆ ನಡೆಸಲಾಗಿದೆ.
ವೈಫಲ್ಯ: ಚುತುಷ್ಪಥ ರಸ್ತೆ ನಿರ್ಮಾಣ ಸಮಯದಲ್ಲಿ ಈ ರಸ್ತೆಯ ಮಧ್ಯದಲ್ಲಿ ಹಾದುಹೋಗಿರುವ ಕುಡಿಯುವ ನೀರಿನ ಪೈಪ್ಲೈನ್ನಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಲೋಪದೋಷಗಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂಬುದು ವಿವಿಧ ಸಂಘಟನೆಗಳ ಮುಖಂಡರ ಆಪಾದನೆ.
ಇದು ಈ ರಸ್ತೆಯ ದುರವಸ್ಥೆ ಮಾತ್ರವಲ್ಲ ನಗರದಲ್ಲಿರುವ ಬಹುತೇಕ ಸಿಮೆಂಟ್ ಕಾಂಕ್ರಿಟ್ ರಸ್ತೆಗಳೂ ಸೇರಿದಂತೆ ಎಲ್ಲ ರಸ್ತೆಗಳ ತುಂಬಾ ಗುಂಡಿಗಳ ಹಾವಳಿ ಇವೆ. ಈ ಗುಂಡಿಗಳನ್ನು ಮುಚ್ಚಲು ನಡೆಸಿರುವ ತೇಪೆ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ.
ತೀನ್ ಕಂದೀಲ್ ವೃತ್ತದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಕಡೆಗೆ ಸಾಗುವ ರಸ್ತೆಯಲ್ಲಿನ ಗುಂಡಿಗಳನ್ನು ಜಲ್ಲಿಕಲ್ಲು ಹಾಕಿ ಮುಚ್ಚಿ ಡಾಂಬರು ಹಾಕಲಾಗಿದೆ. ಆದರೆ, ಬೇರೆಡೆ ಇಂತಹ ಗುಂಡಿಗಳನ್ನು ಬರೀ ಜಲ್ಲಿಕಲ್ಲಿನಿಂದ ಮುಚ್ಚಲಾಗಿದೆ. ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಮಳೆಯ ರಭಸಕ್ಕೆ ಮತ್ತು ವಾಹನಗಳ ಸಂಚಾರ ಒತ್ತಡಕ್ಕೆ ಇವು ರಸ್ತೆಯಿಂದ ಮೇಲೆ ಏಳುತ್ತವೆ.
ಒಟ್ಟಾರೆ ರಸ್ತೆಯ ಹಳ್ಳಗಳು ಸರ್ವ ಋತು ಸಮಸ್ಯೆ ಆಗಿದೆ. ನಗರಸಭೆ ಮತ್ತು ಜಿಲ್ಲಾಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಲೇ ಸಾರ್ವಜನಿಕರು ಸಂಚಾರ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.