ADVERTISEMENT

ಗ್ರಾಪಂ ತುರ್ತು ಸಭೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 7:20 IST
Last Updated 16 ಮಾರ್ಚ್ 2011, 7:20 IST
ಗ್ರಾಪಂ ತುರ್ತು ಸಭೆಗೆ ಮುತ್ತಿಗೆ
ಗ್ರಾಪಂ ತುರ್ತು ಸಭೆಗೆ ಮುತ್ತಿಗೆ   

ಲಿಂಗಸುಗೂರ: ತಾಲ್ಲೂಕಿನ ಸರ್ಜಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಇಂದಿಗೂ ವಾಸ್ತವವಾಗಿ ಕನಿಷ್ಟ ಮಟ್ಟದ ಕುಡಿಯುವ ನೀರು, ಗ್ರಾಮ ರಸ್ತೆ, ಶೌಚಾಲಯ ಸೌಲಭ್ಯಗಳು ಗಗನಕುಸುಮವಾಗಿವೆ. ಕೆಲ ವರ್ಷಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಕಾರ್ಯಕರ್ತರು ಮಂಗಳವಾರ ಕರೆದಿದ್ದ ತುರ್ತು ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ಗ್ರಾಮ ಪಂಚಾಯಿತಿ ಕಟ್ಟಡ ಸರ್ಜಾಪುರದಲ್ಲಿ ಇದ್ದರು ಕೂಡ ಆಡಳಿತ ಕಚೇರಿಯನ್ನು ಲಿಂಗಸುಗೂರ ಪಟ್ಟಣದಲ್ಲಿ ಮಾಡಿಕೊಂಡಿದ್ದಾರೆ. ಸಾಮಾನ್ಯ ಜನತೆ ಸಣ್ಣ ಪುಟ್ಟ ಕೆಲಸಗಳಿಗೂ ಕೂಡ ಪಟ್ಟಣಕ್ಕೆ ಹೋಗಬೇಕಾಗಿದೆ. ಗ್ರಾಮ ಸಭೆಯಲ್ಲಿ ಸಿದ್ಧಗೊಳ್ಳಬೇಕಾದ ಕ್ರಿಯಾಯೋಜನೆಗಳು ಖಾಸಗಿ ಕಚೇರಿಗಳಲ್ಲಿ ಸಿದ್ಧವಾಗುತ್ತಿವೆ. ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಭಿವೃದ್ಧಿ ಬಗ್ಗೆ ಆಡಳಿತ ಮಂಡಳಿ ಸದಸ್ಯರಲ್ಲೂ ಚಿಂತನೆ ಇಲ್ಲದಂತಾಗಿದೆ ಎಂದು ಸಭೆಯಲ್ಲಿ ಕೂಗಾಡಲಾಯಿತು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ. ಗುತ್ತಿಗೆದಾರರೆ ಮಾಲೀಕರಂತೆ ವರ್ತಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಮೂಲ ಉದ್ದೇಶ ಗಾಳಿಗೆ ತೂರಿ ಮನಸೋ ಇಚ್ಛೆ ಚೆಕ್‌ಡ್ಯಾಮ್, ರಸ್ತೆ ಅಭಿವೃದ್ಧಿ, ಕಂಪೌಂಡ ನಿರ್ಮಾಣ, ಕೃಷಿ ಹೊಂಡ ನಿರ್ಮಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ಗ್ರಂಥಾಲಯ ಒಂದು ದಿನವು ತೆರೆದಿಲ್ಲ. ಅದರ ನಿರ್ವಹಣೆ ಹೆಸರಲ್ಲಿ ಹಣ ಖರ್ಚು ಮಾಡಿರುವ ಬಗ್ಗೆ ಸಭೆ ಗಮನ ಸೆಳೆದರು.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮರಪ್ಪ ಅಂಗಡಿ ಮಾತನಾಡಿ, ಇಷ್ಟು ದಿನಗಳ ಕಾಲ ಏನು ನಡೆದಿದೆ ಗೊತ್ತಿಲ್ಲ. ತಾವು ಹೊಸದಾಗಿ ಬಂದಿದ್ದು ಮುಂದಿನ ದಿನಗಳಲ್ಲಿ ಹಾಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಯಾವುದೇ ಕಾನೂನು ವಿರೋಧಿ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಮುತ್ತಿಗೆ ನೇತೃತ್ವವನ್ನು ಗ್ರಾಮ ಘಟಕದ ಮುಖಂಡರಾದ ಭಗೀರಥ, ನಿಜಗುಣಿ, ಹುಚ್ಚರಡ್ಡಿ, ಬಸವರಾಜ, ಅಮರೇಶ, ಶಂಕರ, ರಾಮಣ್ಣ, ತಿರುಪತಿ, ಮಲ್ಲಪ್ಪ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.