ADVERTISEMENT

ಜಿಟಿಟಿಸಿ ಕಾಲೇಜು ಪ್ರಾಚಾರ್ಯ ವರ್ಗಾವಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 9:10 IST
Last Updated 23 ಫೆಬ್ರುವರಿ 2012, 9:10 IST

ಲಿಂಗಸುಗೂರ: ಸ್ಥಳೀಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉಪನ್ಯಾಸಕರ ಕಿರುಕುಳಕ್ಕೆ ಬೇಸತ್ತು ಬಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಬುಧವಾರ ಸಚಿವ ರಾಜಾ ನರಸಿಂಹ ನಾಯಕ (ರಾಜುಗೌಡ) ಕಾಲೇಜಿಗೆ ಭೇಟಿ ನೀಡಿ ಕೆಲವೆ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಕೂಡಲೆ ಪ್ರಾಚಾರ್ಯ ಯಲ್ಲಪ್ಪ ಅವರನ್ನು ವರ್ಗಾವಣೆ ಮಾಡುವಂತೆ ತನಿಖಾ ತಂಡಕ್ಕೆ ಸೂಚಿಸಿದರು.

ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಾಜರಿದ್ದ ವಿದ್ಯಾರ್ಥಿಗಳನ್ನು ವಿಚಾರಿಸಲಾಗಿ, ಕಾಲೇಜಿಗೆ ರಜೆ ನೀಡುವ ಮೂಲಕ ನಿಯಮ ಉಲ್ಲಂಘಿ ಸಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜಿನತ್ತ ಸುಳಿಯದಂತೆ ಕ್ರಮ ಕೈಗೊಂಡಿದ್ದಾರೆ. ಉಪನ್ಯಾಸಕರ ಅನಗತ್ಯ ಕಿರುಕುಳಕ್ಕೆ ಬೇಸತ್ತಿದ್ದೇವೆ. ಕೂಡಲೆ ಪ್ರಚಾರ್ಯರನ್ನು ವರ್ಗಾವಣೆ ಮಾಡುವಂತೆ ಸಚಿವರ ಮುಂದೆ ಅಳಲು ತೋಡಿಕೊಂಡರು. ಇಡಿ ವಿದ್ಯಾರ್ಥಿ ಸಮೂಹದ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳುವಂತೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಬಿಡಿಸಿಟ್ಟರು.

ಸ್ಥಳದಲ್ಲಿಯೆ ಹಾಜರಿದ್ದ ಜಿಟಿಟಿಸಿ ಕೇಂದ್ರ ಆಡಳಿತ ಕಚೇರಿ ಸಹಾಯಕ ವ್ಯವಸ್ಥಾಪಕ ಮುನಿರ್, ಬೆಂಗಳೂರ ಜಿಟಿಟಿಸಿ ಕಾಲೇಜಿನ ಪ್ರಾಚಾರ್ಯ ಪುಂಡರಿಕಾಕ್ಷ ಅವರಿಗೆ ಪ್ರಚಾರ್ಯ ಯಲ್ಲಪ್ಪ ಅವರನ್ನು ಕೂಡಲೆ ವರ್ಗಾವಣೆಗೆ ಶಿಫಾರಸ್ಸು ಮಾಡಿ. ಎಲ್ಲಾ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ವಿಚಾರಣೆ ಮಾಡಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು. ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಏನೆ ಇರಲಿ ಆ ವಿದ್ಯಾರ್ಥಿ ಗುಣಮುಖವಾಗಿ ಬರಲಿ ಎಂದು ಪ್ರಾರ್ಥಿಸುವ. ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸಲು ಪರಿಶೀಲಿಸಲಾಗುವುದು ಎಂದರು.

ಸಭೆಗೆ ಹೋಗುವೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಕರೆದಿರುವ ಔಪಚಾರಿಕ ಸಭೆಗೆ ತಾವು ಕೂಡ ಭಾಗವಹಿಸುವೆ. ಇಂತಹ ಸಭೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಮಾಧ್ಯಮಗಳು ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಈಗಲೆ ಬೆಂಗಳೂರಿಗೆ ತೆರಳುತ್ತಿರುವುದಾಗಿ ಸಚಿವ ರಾಜೂಗೌಡ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್ಲ, ರಾಜಾ ಸೋಮನಾಥ ನಾಯಕ, ಕಂಠೆಪ್ಪಗೌಡ, ರಮೇಶ ಜೋಷಿ, ಎಚ್.ಬಿ. ಮುರಾರಿ, ಶಿವಾನಂದ ಐದನಾಳ, ವೆಂಕಟೇಶ ಗುತ್ತೆದಾರ, ಮಹಾದೇವಯ್ಯ ಗೌಡೂರು, ಹೊನ್ನಪ್ಪ ಮೇಟಿ, ಬಸಣ್ಣ ನರಕಲದಿನ್ನಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.