ADVERTISEMENT

ಜಿಲ್ಲೆಯಲ್ಲಿ ಭಾರಿ ಗಾಳಿ: ಜೀವನ ಅಸ್ತವ್ಯಸ್ತ

ಸಿಂಧನೂರು ತಾಲ್ಲೂಕು ವಲ್ಕಂದಿನ್ನಿ ಗ್ರಾಮದಲ್ಲಿ ಬೆಂಕಿ ಅವಘಡ; ಗುಡಿಸಲು ಭಸ್ಮ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:26 IST
Last Updated 4 ಮೇ 2018, 11:26 IST
ರಾಯಚೂರಿನಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಯ ದೃಶ್ಯ
ರಾಯಚೂರಿನಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಯ ದೃಶ್ಯ   

ರಾಯಚೂರು: ಜಿಲ್ಲೆಯ ವಿವಿಧ ಕಡೆ ಗುರುವಾರ ಸಂಜೆ ಭಾರಿ ಪ್ರಮಾಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಾಳಿ ಬೀಸಿದ್ದರಿಂದ ರಸ್ತೆ ಅಂಚಿನಲ್ಲಿದ್ದ ಅಂಗಡಿ ಮುಗ್ಗಟ್ಟುಗಳ ಎದುರು ಪಾತ್ರೆ, ಪಗಡೆ ಹಾಗೂ ಇತರೆ ಪರಿಕರಗಳು ಹಾರಿಕೊಂಡು ಬಿದ್ದವು. ದಿಕ್ಕುತೋಚದೆ ಜನರೆಲ್ಲ ಓಡಿ ಹೋಗುತ್ತಿದ್ದ ದೃಶ್ಯ ಕಂಡು ಬಂತು. ಗಾಳಿಯಲ್ಲಿ ಕಸ ಹಾಗೂ ಮಣ್ಣು ಮಿಶ್ರಣವಾಗಿದ್ದರಿಂದ ನಡೆದುಕೊಂಡು ಹೋಗುತ್ತಿದ್ದ ಜನರೆಲ್ಲ ತೊಂದರೆ ಅನುಭವಿಸಿದವರು.

ಹೋಟಲ್‌ಗಳು ಸೇರಿದಂತೆ ಆಹಾರ ಪದಾರ್ಥ ಮಾರಾಟ ಮಾಡುವ ಅಂಗಡಿಕಾರರು ತಾಪತ್ರಯ ಅನುಭವಿಸು
ವಂತಾಯಿತು. ದಿಢೀರ್‌ ಗಾಳಿಯಿಂದ ಕಸವೆಲ್ಲ ಅಂಗಡಿಗೆ ನುಗ್ಗಿದ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ಅಂಗಡಿಗಳು ಮತ್ತು ಹೋಟೆಲ್‌ಗಳು ತಕ್ಷಣ ಬಾಗಿಲು ಬಂದ್‌ ಮಾಡಿಕೊಂಡು ಸಮಸ್ಯೆ ಹೆಚ್ಚಾಗುವುದರಿಂದ ಪಾರಾದರು.

ಮಸ್ಕಿ ವರದಿ: ಪಟ್ಟಣದಲ್ಲಿ ಗುರುವಾರ ಸಂಜೆ ಬೀಸಿದ ಬಾರಿ ಬಿರುಗಾಳಿ ಪಟ್ಟಣವನ್ನು ತಲ್ಲಣಗೊಳಿಸಿತು. ಸಂಜೆ ಸುಮಾರು ಒಂದು ಗಂಟೆಗಳ ಕಾಲ ಭಾರಿ ಬಿರುಗಾಳಿ ಬೀಸಿತು.

ADVERTISEMENT

ಗಾಳಿಯಹೊಡೆತಕ್ಕೆ ಅಂಗಡಿಗಳ ಮುಂದೆ ಹಾಕಲಾಗಿದ್ದ ಚಪ್ಪರಗಳು ಗಾಳಿಗೆ ಹಾರಿಕೊಂಡು ಹೋದವು. ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.

ಬಿರುಗಾಳಿಯ ರಭಸಕ್ಕೆ ಕೆಲವು ಅಂಗಡಿಗಳಲ್ಲಿ ಖರ್ಚಿಗಳು, ಬಟ್ಟೆ ಅಂಗಡಿ ಒಳಗೆ ಹಾಕಲಾಗಿದ್ದ ಬಟ್ಟೆಗಳು ಹಾರಾಡಿದವು. ರಸ್ತೆ ಮೇಲೆ ವೇಗದಲ್ಲಿ ಗಾಳಿ ಬಿಸಿದ್ದರಿಂದ ಕಸದ ತೊಟ್ಟೆಯಲ್ಲಿ ಹಾಕಲಾಗಿದ್ದ ಕಸದ ರಾಶಿ ಹಾರಿ ರಸ್ತೆ ಮೇಲೆ ಬಿದ್ದವು. ವಿದ್ಯುತ್ ವೈರಗಳು ಎಲ್ಲೆಂದರಲ್ಲಿ ತುಂಡು ತುಂಡಾಗಿ ಬಿದ್ದಿದ್ದ ದೃಶ್ಯ ಕಂಡು ಬಂತು.

ವಲ್ಕಂದಿನ್ನಿ ಗ್ರಾಮದಲ್ಲಿ ಬೆಂಕಿ: ಗುರುವಾರ ಸಂಜೆ ಬೀಸಿದ ಬಿರುಗಾಳಿಯಿಂದ ಹಾರಿಬಂದ ಬೆಂಕಿಯ ಕಿಡಿಗಳು ತಗುಲಿದ್ದರಿಂದ ಒಂದು ಗುಡಿಸಲು ಸುಟ್ಟಿದ್ದು, ಗ್ರಾಮದ ಜನರೆಲ್ಲ ಭಯದಿಂದ ಹೊರಬಂದು ರಸ್ತೆಗಳಲ್ಲಿ ಜಮಾಯಿಸಿದ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ವಲ್ಕಂದಿನ್ನಿಯಲ್ಲಿ ನಡೆದಿದೆ.

‘ಗ್ರಾಮದ ಹೊರಭಾಗದ ಹೊಲದಲ್ಲಿ ತ್ಯಾಜ್ಯ ಸಂಗ್ರಹಿಸಿ ಬೆಂಕಿ ಹಾಕಲಾಗಿತ್ತು. ಅದೇ ವೇಳೆ ಭಾರಿ ಪ್ರಮಾಣದ ಗಾಳಿ ಬೀಸಿದ್ದರಿಂದ ಬೆಂಕಿಯ ಕಿಡಿಗಳೆಲ್ಲ ಗ್ರಾಮದತ್ತ ಹಾರಿ ಬಂದವು. ಗುಡಿಸಲಿಗೆ ಮೊದಲು ಬೆಂಕಿ ಹೊತ್ತಿಕೊಂಡಿತು. ಆನಂತರ ಮೇವಿನ ಬಣಿವೆಗೂ ಬೆಂಕಿ ತಗುಲಿತು’ ಎಂದು ಪ್ರತ್ಷಕ್ಷದರ್ಶಿ ಗ್ರಾಮಸ್ಥ ಗಂಗಾಧರ ತಿಳಿಸಿದ್ದಾರೆ.

‘ಸುಮಾರು 1,500 ಜನಸಂಖ್ಯೆ ಇದ್ದು, ಎಲ್ಲರೂ ಗ್ರಾಮದಿಂದ ಅರ್ಧ ಕಿಲೋ ಮೀಟರ್‌ ದೂರದಲ್ಲಿ ಬಿಡು ಬಿಟ್ಟಿದ್ದಾರೆ. ಸಂಜೆ 6.30ಕ್ಕೆ ಬೆಂಕಿ ಹೊತ್ತಿಕೊಂಡಿತು. 7.40ಕ್ಕೆ ಅಗ್ನಿಶಾಮಕದವರು ಬಂದು ಬೆಂಕಿ ನಂದಿಸಿದರು’ ಎಂದು ಹೇಳಿದರು.

ವಲ್ಕಂದಿನ್ನಿ ಗ್ರಾಮವು ಸಿಂಧನೂರು ತಾಲ್ಲೂಕು ಕೇಂದ್ರದಿಂದ 28 ಕಿಲೋ ಮೀಟರ್‌ ದೂರದಲ್ಲಿದ್ದು, ಬೆಂಕಿ ಘಟನೆಯಿಂದ ಯಾವುದೇ ಜೀವಹಾನಿಯಾಗಿಲ್ಲ.

**
ಬಿರುಗಾಳಿಗೆ ಎಲ್ಲೆಲ್ಲಿ ಏನು ಅನಾಹುತವಾಗಿದೆ ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ
– ರಿಯಾಜ್ ಅಹ್ಮದ್, ಜೆಸ್ಕಾಂ ಮಸ್ಕಿ ಉಪ ವಿಭಾಗದ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.