ADVERTISEMENT

ನದೀಮುಲ್ಲಾ ನಗರಸಭೆ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:40 IST
Last Updated 18 ಫೆಬ್ರುವರಿ 2011, 9:40 IST

ಸಿಂಧನೂರು: ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ನಡೆದ ಚುನಾವಣೆಯಲ್ಲಿ ಎಂ.ಡಿ.ನದೀಮುಲ್ಲಾ ಆಯ್ಕೆಯಾದರು. ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಷಾ ನದೀಮುಲ್ಲಾ ಅವರ ಹೆಸರನ್ನು ಸೂಚಿಸಿದರು. ಮಾಜಿ ಉಪಾಧ್ಯಕ್ಷ ಮಹೆಬೂಬ ಹುಸೇನಸಾಬ ಅನುಮೋದಿಸಿದರು. ಹಾಜರಿದ್ದ ಆಡಳಿತಾರೂಢ ಜಾತ್ಯತೀತ ಜನತಾ ದಳದ 14 ಸದಸ್ಯರಲ್ಲಿ 11 ಸದಸ್ಯರು ನದೀಮುಲ್ಲಾ ಅವರ ಪರವಾಗಿ ಕೈ ಎತ್ತಿದರು. ಹಾಗೆಯೇ ಬಿಜೆಪಿಯ ಮೂವರು ಸಹ ನದೀಮುಲ್ಲಾ ಅವರನ್ನು ಬೆಂಬಲಿಸಿದರು. ಪ್ರತಿಸ್ಪರ್ಧಿ ಹನುಮಂತಪ್ಪ ಗುಡಿ ವಕೀಲರಿಗೂ ಗೋವಿಂದ ರಾವ್ ಮತ್ತು ಚನ್ನಮ್ಮ ಮಾತ್ರ ಬೆಂಬಲಿಸಿದ್ದರಿಂದ ಹನುಮಂತಪ್ಪ ಗುಡಿ ಪರಾಭವಗೊಂಡರು.

ಮತದಾನದ ಸಮಯದಲ್ಲಿ ಹಾಜರಿದ್ದ 17 ಸದಸ್ಯರಲ್ಲಿ 14 ಸದಸ್ಯರು ನದೀಮುಲ್ಲಾ ಅವರನ್ನು ಬೆಂಬಲಿಸಿದ್ದರಿಂದ ಚುನಾವಣಾ ಅಧಿಕಾರಿ ಲಿಂಗಸಗೂರು ಸಹಾಯಕ ಆಯುಕ್ತ ನದೀಮುಲ್ಲಾ ಅವರನ್ನು ಉಪಾಧ್ಯಕ್ಷರೆಂದು ಘೋಷಿಸಿದರು. ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಜಾಫರ್ ಜಾಗೀರದಾರ, ಸೈಯದ್‌ವಲಿ ಮಿಟ್ಟಿಮನಿ ನಾಮಪತ್ರ ಸಲ್ಲಿಸಿದ್ದರು. ಅವರಿಬ್ಬರು ಕೊನೆ ಗಳಿಗೆಯಲ್ಲಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಆಡಳಿತಾರೂಢ ಪಕ್ಷದ ಇಬ್ಬರು ಸದಸ್ಯರಲ್ಲಿ ಸ್ಪರ್ಧೆ ನಡೆದಿತ್ತು.

ಕಾಂಗ್ರೆಸ್ ಪಕ್ಷದ ಹಂಪನಗೌಡರ ಬೆಂಬಲಿಗರು 7 ಜನ ಸದಸ್ಯರು, ಮಾಜಿ ಸಂಸದ ಕೆ.ವಿರೂಪಾಕ್ಪಪ್ಪ ಬೆಂಬಲಿಗರೆನ್ನಲಾದ 6ಜನ ಸದಸ್ಯರು ಚುನಾವಣಾ ಸಭೆಯಲ್ಲಿ ಹಾಜರಾಗಿ ಯಾರಿಗೂ ಮತ ಹಾಕದೇ ಹೊರ ನಡೆದರು. ಒಟ್ಟು 31 ಸದಸ್ಯರ ಪೈಕಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಪಾಟೀಲ್ ಹೊರತುಪಡಿಸಿ ಅಧ್ಯಕ್ಷೆ ಪದ್ಮಾವತಿ ಕರಿಯಪ್ಪ ಸೇರಿದಂತೆ ಎಲ್ಲ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ನಗರಸಭೆ ಪೌರಾಯುಕ್ತ ಕೊಪ್ರೇಶಾಚಾರ್, ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.