ರಾಯಚೂರು: ‘ರಾಜ್ಯದಲ್ಲಿ ಒಬ್ರು ರೈತನ ಮಗ... ಇನ್ನೊಬ್ರು ಮಣ್ಣಿನ ಮಗ... ಎಂದು ಹೇಳಿದ್ದೆ ಹೇಳಿದ್ದು. ಹಾಗಾದ್ರೆ ನಾವೆಲ್ಲ ಯಾರ ಮಕ್ಕಳು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದ್ದು ಜನರು ನಗುವಂತೆ ಮಾಡಿತು.
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ₹14,400 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ಯಡಿಯೂರಪ್ಪ ಒಬ್ರೆನಾ ರೈತನ ಮಗ. ಸತ್ಯ ಹೇಳಿದ್ರೆ ಯಡಿಯೂರಪ್ಪನಿಗೆ ಸಿಟ್ಟು ಬರುತ್ತದೆ. ಜೈಲಿಗೆ ಹೋಗಿದ್ದು, ಈಗ ಬೇಲ್ ಮೇಲೆ ಹೊರಗಡೆ ಓಡಾಡುತ್ತಿರುವುದು ಸತ್ಯವಲ್ಲವೆ?’ ಎಂದರು.
‘ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲೆ ಏನೇನು ಮಾಡ್ತೀವಿ ಅಂಥ ಮಾತನಾಡುತ್ತಿದ್ದಾರೆ. ಇಂಥ ಮಾತು ಮುಖ್ಯವಲ್ಲ. ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದೀರಿ ಎನ್ನುವುದನ್ನು ಜನರಿಗೆ ಹೇಳಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರವು ನೂರಕ್ಕೆ ನೂರು ಭ್ರಷ್ಟವಾಗಿತ್ತು. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರೋದಿಲ್ಲ ಎನ್ನುವುದು ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ರೈತರ ಸಾಲವನ್ನೆಲ್ಲ ಮನ್ನಾ ಮಾಡ್ತಿನಿ ಎಂದು ಹೇಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.