ರಾಯಚೂರು: ಜಿಲ್ಲೆಯ ಹತ್ತಿಯನ್ನು ಬೇರೆ ರಾಜ್ಯಕ್ಕೆ ಅನಧಿಕೃತ ಖರೀದಿದಾರರು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ರಾಜ್ಯಕ್ಕೆ ಪ್ರತಿ ತಿಂಗಳು ₨ 250ಕೋಟಿ ತೆರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹತ್ತಿ ಜಿನ್ನಿಂಗ್ ಘಟಕಗಳ ಮಾಲೀಕರ ಸಂಘದ ಕಾರ್ಯದರ್ಶಿ ಲಕ್ಷ್ಮೀರೆಡ್ಡಿ ಹಾಗೂ ಸಂಘದ ಪ್ರತಿನಿಧಿ ಎನ್. ಬಾಬುಲಾಲ್ ಜೈನ್ ಹೇಳಿದರು.
ಸೋಮವಾರ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆ ವಂಚಿಸಿ ಬೇರೆ ರಾಜ್ಯಗಳಿಗೆ ಅನಧಿಕೃತ ಖರೀದಿದಾರರು ಹತ್ತಿ ಖರೀದಿ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ನಡೆದರೆ ಜಿಲ್ಲೆಯ 70 ಜಿನ್ನಿಂಗ್ ಕಾರ್ಖಾನೆ ಬಂದ್ ಮಾಡುವ ಪರಿಸ್ಥಿತಿ ನಿರ್ಮಾ ಣವಾಗುತ್ತದೆ. ಕೆಲಸ ಮಾಡುವ ಕಾರ್ಮಿಕರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಮಸ್ಯೆ ವಿವರಿಸಿದರು.
ರೈತರಿಗೆ ಅನಧಿಕೃತ ಖರೀದಿದಾರರು ವಂಚನೆ ಮಾಡುತ್ತಿದ್ದಾರೆ. ಸರ್ಕಾರ ಜಿನ್ನಿಂಗ್ ಕಾರ್ಖಾನೆಗಳಿಗೆ ರೈತರಿಗೆ ತೊಂದರೆ ಮಾಡದಂತೆ ಅನೇಕ ಷರತ್ತು ವಿಧಿಸಿದೆ. ಆದರೆ, ಅನಧಿಕೃತ ಖರೀದಿದಾರರು ರೈತರನ್ನು ಹಾಗೂ ಸರ್ಕಾರವನ್ನು ವಂಚಿಸುತ್ತಿರುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಪ್ರತಿದಿನ ಜಿಲ್ಲೆಯ 120 ಕ್ವಿಂಟಲ್ ಹತ್ತಿ ತುಂಬಿಕೊಂಡ 200 ವಾಹನಗಳು ಇತರ ರಾಜ್ಯಗಳಿಗೆ ಹೋಗುತ್ತವೆ. ಈ ವಾಹನಗಳ ಮೂಲಕ ಹೋಗುವುದರಿಂದ ರಾಜ್ಯಕ್ಕೆ ತೆರಿಗೆ ವಂಚನೆಯಾಗುತ್ತದೆ ಎಂದು ಹೇಳಿದರು.
ಸರ್ಕಾರ ರೈತರ ಹಿತದೊಂದಿಗೆ ಜಿನಿಂಗ್ ಕಾರ್ಖಾನೆ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಕೂಡಲೇ ಸರ್ಕಾರ ಅನಧಿಕೃತವಾಗಿ ಹತ್ತಿ ಖರೀದಿದಾರರ ನಿಯಂತ್ರಣಗೊಳಿ ಸಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ಹತ್ತಿ ಖರೀದಿ ವ್ಯವಸ್ಥೆ ಮಾಡಬೇಕು ಎಂದರು.
ಜಿನ್ನಿಂಗ್ ಫ್ಯಾಕ್ಟರಿ ಮಾಲೀಕರ ಸಂಘದ ಸಣ್ಣ ವಿ.ನಾಗರೆಡ್ಡಿ, ಅಶೋಕ ಕುಮಾರ ವರ್ಮಾ, ಶರಣಭೂಪಾಲ ನಾಡಗೌಡ, ರಾಮಾನುಜದಾಸ್ ಬೂಬ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.