ADVERTISEMENT

ಪ್ರಗತಿ ಹಂತದಲ್ಲಿ ಯಾತ್ರಿ ನಿವಾಸ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:35 IST
Last Updated 22 ಅಕ್ಟೋಬರ್ 2012, 5:35 IST

ಮಾನ್ವಿ: ಪಟ್ಟಣದ ಹೊರವಲಯದಲ್ಲಿರುವ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎದುರಿಗೆ ಕಲ್ಮಠದವತಿಯಿಂದ  ಕೈಗೊಳ್ಳಲಾಗಿರುವ ಬೃಹತ್ ಶಿವಲಿಂಗ ಆಕಾರದ ಯಾತ್ರಿನಿವಾಸ ಹಾಗೂ ಧ್ಯಾನಮಂದಿರದ ಕಟ್ಟಡ ನಿರ್ಮಾಣದ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಕೆಲವೇ ತಿಂಗಳಲ್ಲಿ ಪಟ್ಟಣಕ್ಕೆ ಆಗಮಿಸುವ ಯಾತ್ರಾರ್ಥಿಗಳು ಹಾಗೂ ಧ್ಯಾನಾಸಕ್ತರನ್ನು ಆಕರ್ಷಿಸಲಿದೆ. 

ಅಂದಾಜು 1.50ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ 111ಗಿ107 ಅಡಿ ಅಗಲ ಹಾಗೂ 57ಅಡಿ ಎತ್ತರದ ಶಿವಲಿಂಗ ಆಕಾರದ ಬೃಹತ್ ಕಟ್ಟಡ ಇದಾಗಿದ್ದು ಕಟ್ಟಡದ ಕೆಳಭಾಗದಲ್ಲಿ ಯಾತ್ರಿ ನಿವಾಸ ಹಾಗೂ ಮೇಲ್ಭಾಗದಲ್ಲಿ ಧ್ಯಾನಮಂದಿರವನ್ನು ನಿರ್ಮಿಸಲಾಗುತ್ತಿದೆ. ಈ ಮಂದಿರದಲ್ಲಿ 1ಲಕ್ಷ ಶಿವಲಿಂಗಗಳನ್ನು ಕೂಡ ಸ್ಥಾಪಿಸಲಾಗುತ್ತಿದೆ.

ಪಟ್ಟಣದ ಶ್ರೀಜಗನ್ನಾಥದಾಸ ಮಂದಿರ, ಚೀಕಲಪರ್ವಿಯ ವಿಜಯದಾಸರ ಕಟ್ಟೆ, ಐತಿಹಾಸಿಕ ಕಲ್ಮಠ, ಸಮೀಪದ ಮಂತ್ರಾಲಯ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಜರುಗುವ ಉತ್ಸವ, ಆಚರಣೆಗಳಿಗಾಗಿ ವರ್ಷಾದ್ಯಂತ ನಾಡಿನ ಹಲವು ಭಾಗಗಳಿಂದ ಭಕ್ತರು, ಯಾತ್ರಿಗಳು ತಾಲ್ಲೂಕಿಗೆ ಆಗಮಿಸುತ್ತಾರೆ.

ಇದೀಗ ಮಾನ್ವಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ವಿಶಾಲವಾದ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿವಲಿಂಗ ಆಕಾರದ ಯಾತ್ರಿನಿವಾಸ ಹಾಗೂ ಧ್ಯಾನ ಮಂದಿರ ಮತ್ತೊಂದು ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂದೇಹವಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ಇಲ್ಲಿನ ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಈ ಕಟ್ಟಡದ ರೂವಾರಿಯಾಗಿದ್ದು ತಮಗೆ ಸೇರಿದ ಸುಮಾರು 2ಕೋಟಿ ರೂಪಾಯಿ ಮೌಲ್ಯದ ನಿವೇಶನವನ್ನು ಕಟ್ಟಡಕ್ಕಾಗಿ ಬಿಟ್ಟುಕೊಟ್ಟಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕುರಿತು `ಪ್ರಜಾವಾಣಿ~ ಜತೆಗೆ ಮಾತನಾಡಿದ ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, `ಸಾರ್ವಜನಿಕರ  ಹಿತಾಸಕ್ತಿಗಾಗಿ ಕಲ್ಮಠದ ವತಿಯಿಂದ ಬೃಹತ್ ಶಿವಲಿಂಗ ಆಕಾರದ ಯಾತ್ರಿನಿವಾಸ ಹಾಗೂ ಧ್ಯಾನಮಂದಿರವನ್ನು ನಿರ್ಮಿಸಲಾಗುತ್ತಿದೆ. ತಾಲ್ಲೂಕಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆ  ಕಲ್ಪಿಸುವ ಯೋಜನೆ ಹೊಂದಲಾಗಿದೆ~ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT