ದೇವದುರ್ಗ: ದೇವರ ಸ್ಮರಣೆಯಲ್ಲಿ ಭಕ್ತಿಯ ಅಭಿರುಚಿ ಇರಬೇಕೆ ಹೊರತು ಯಾವುದೊ ಒಂದು ಬೇಡಿಕೆಯನ್ನು ಇಟ್ಟುಕೊಂಡು ದೇವರಿಗೆ ಕೈಮುಗಿದರೆ ಅದರಿಂದ ಭಕ್ತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ಸೋಲ್ಲಾಪೂರದ ಶ್ರೀ ರಾಜಶೇಖರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.ಶುಕ್ರವಾರ ಪಟ್ಟಣದ ಎ. ಮಲ್ಲಿಕಾರ್ಜುನ ಪಾಟೀಲ ಅವರ ಮನೆಯಲ್ಲಿ ದಿ. ಎ. ಶರಣಪ್ದ ಹಾಗೂ ದಿ. ಮಲ್ಲಮ್ಮ ಅವರ 14ನೇ ವರ್ಷದ ಸ್ಮರಣೆ ಮತ್ತು 36ನೇ ವರ್ಷದ ಶ್ರೀ ಶೈಲಾ ಪಾದಯಾತ್ರಿಗಳಿಗೆ ಅನ್ನ ದಾಸೋಹ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಡಿದರು.
ಎಲ್ಲರೂ ದೇವರಿಗೆ ಕೈಮುಗಿಯುವುದನ್ನು ಕಾಣುತ್ತೇವೆ ಆದರೆ ನಿಜವಾದ ಭಕ್ತಿಯ ಸ್ವರೂಪ ಕಾಣುವುದು ಬಹಳ ಅಪರೂಪ ಎಂದ ಅವರು, ಕಳೆದ 36 ವರ್ಷಗಳಿಂದ ಸತತವಾಗಿ ಯಾತ್ರಿಗಳಿಗೆ ಅನ್ನ ದಾಸೋಹ ನಡೆಸುತ್ತಾ ಬಂದಿರುವ ಎ. ಮಲ್ಲಿಕಾರ್ಜುನ ಕುಟುಂಬ ಇತರರಿಗೆ ಮಾದರಿಯಾಗಲಿ ಎಂದು ಹಾರೈಹಿಸಿದರು.
ಮಹಾಂತೇಶ್ವರ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ ಅವರು ಕಾರ್ಯಕ್ರಮ ನೇತೃತ್ವ ವಹಿಸಿದ್ದರು. ಮಾಜಿ ಕಸಾಪ ಅಧ್ಯಕ್ಷ ಎಚ್. ದಂಡಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಾಸೋಹ: ಸೋಲ್ಲಾಪೂರದಿಂದ ಶ್ರೀಶೈಲಾದ ವರೆಗೂ ಪಾದಯಾತ್ರೆ ಕೈಗೊಂಡಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಪಾದಯಾತ್ರಿಗಳಿಗೆ ಅನ್ನ ದಾಸೋಹ ಮಾಡಲಾಯಿತು. ಅಮರಣ್ಣಗೌಡ ಗೌರಂಪೇಟೆ, ಎ. ಮಲ್ಲಿಕಾರ್ಜುನ ಪಾಟೀಲ, ಎ. ಶರಣಗೌಡ ಪಾಟೀಲ, ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಸಾಹಿತಿ ಅಮರೇಶ ಬಲ್ಲಿದವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.