ADVERTISEMENT

ಮಠಗಳ ಸಾಮಾಜಿಕ ಚಿಂತನೆ ಬಡವರಿಗೆ ಬೆಳಕು

ಲಿಂಗೈಕ್ಯ ಬಸವಲಿಂಗಯ್ಯ ತಾತನವರ ಆರಾಧನಾ ಮಹೋತ್ಸವದಲ್ಲಿ ರಂಭಾಪುರಿ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 9:39 IST
Last Updated 16 ಮಾರ್ಚ್ 2018, 9:39 IST
ಸಿರವಾರ ಸಮೀಪದ ಬಲ್ಲಟಗಿ ಗ್ರಾಮದಲ್ಲಿ ಗುರುವಾರ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 9ನೇ ಆರಾಧನೆ, ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾನ್ವಿಯ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು ಉದ್ಘಾಟಿಸಿದರು
ಸಿರವಾರ ಸಮೀಪದ ಬಲ್ಲಟಗಿ ಗ್ರಾಮದಲ್ಲಿ ಗುರುವಾರ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 9ನೇ ಆರಾಧನೆ, ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾನ್ವಿಯ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು ಉದ್ಘಾಟಿಸಿದರು   

ಸಿರವಾರ: ‘ಮಠಗಳು ಮಾನವ ಧರ್ಮದ ಏಳಿಗೆಗಾಗಿ ಶ್ರಮಿಸುತ್ತಿದ್ದು, ಇಂದಿನ ಮಠಗಳ ಸಾಮಾಜಿಕ ಚಿಂತನೆಗಳು ಬಡವರ ಬಾಳಿಗೆ ಬೆಳಕನ್ನು ನೀಡುತ್ತಿವೆ’ ಎಂದು ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಮೀಪಿದ ಬಲ್ಲಟಗಿಯಲ್ಲಿ ಲಿಂಗೈಕ್ಯ ಬಸವಲಿಂಗಯ್ಯ ತಾತನವರ 9ನೇ ಆರಾಧನೆ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಒಂದು ಮದುವೆಗಾಗಿ ಬಡವರು ನಾನಾ ರೀತಿಯ ತೊಂದರೆ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಅನೇಕ ಮಠಮಾನ್ಯಗಳು ಸಾಮೂಹಿಕ ವಿವಾಹ ಕಾರ್ಯಗಳು, ಅನ್ನದಾಸೋಹ, ಅಕ್ಷರ ದಾಸೋಹಗಳಂತಹ ಮಹತ್ಕಾರ್ಯಗಳನ್ನು ನಡೆಸಿಕೊಡುತ್ತಿವೆ. ಅದರಲ್ಲಿಯೂ ಸಣ್ಣ ಹಳ್ಳಿಯಲ್ಲಿಯೂ ಸಹ ನೂರಾರೂ ಜೋಡಿಗಳ ಸಾಮೂಹಿಕ ವಿವಾಹಗಳನ್ನು ನಡೆಸಿಕೊಡುತ್ತಿರುವುದು ಸಾಮಾನ್ಯ ವಿಷಯವಲ್ಲ’ ಎಂದು ಹೇಳಿದರು.

ADVERTISEMENT

‘ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ವಧು-ವರರಿಗೆ ಹತ್ತಾರು ಸ್ವಾಮೀಜಿಗಳು ಮತ್ತು ನೂರಾರು ಮುಖಂಡರ ಆಶೀರ್ವಾದದಿಂದ ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದರು.

ನೀಲಗಲ್ಲು ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಚ್ಚಾಲಿ-ಮಟಮಾರಿ ಸಾವಿರ ದೇವರ ಸಂಸ್ಥಾನ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಜಾಲಹಳ್ಳಿಯ ಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ 101 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.