ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಮಾಚನೂರು ಗ್ರಾಮದಲ್ಲಿ ಕಾಣಿಸಿಕೊಂಡ ಡೆಂಗೆ ಜ್ವರದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೈ. ವೆಂಕಟೇಶ ಅನಿರೀಕ್ಷಿತ ಭೇಟಿ ನೀಡಿ ಗ್ರಾಮದ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದರು.
ಡೆಂಗೆ ಜ್ವರದ ಪರಿಣಾಮದಿಂದಾಗಿ ಮೃತ ಪಟ್ಟ ಬಾಲಕ ದುರಗಣ್ಣ ಕುಟುಂಬದ ಸದಸ್ಯರಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಬಳ್ಳಾರಿಯಲ್ಲಿ ಪರೀಕ್ಷೆಗೆ ಒಳಪಟ್ಟ ಡೆಂಗೆ ಜ್ವರದ ಲಕ್ಷಣಗಳು ಖಚಿತ ಪಟ್ಟ ಅಂಬಿಕಾ ಮನೆಗೆ ಸಹ ಭೇಟಿ ನೀಡಿದರು. ಸದಸ್ಯರಲ್ಲಿ ಅನಾರೋಗ್ಯ ಲಕ್ಷಣ ಕಂಡುಬಂದ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ತಕ್ಷಣ ಆರೋಗ್ಯ ಸಿಬ್ಬಂದಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಸ್ವಚ್ಛತೆಯನ್ನು ಕಾಪಾಡುವಂತೆ ಸಲಹೆ ನೀಡಿದರು.
ಗ್ರಾಮದಲ್ಲಿ ಸ್ವಚ್ಛತೆ ಕುರಿತು ಗ್ರಾಮಸ್ಥರೊಂದಿಗೆ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಂಡಲ್ಲಿ ಶೇ, 90 ರಷ್ಟು ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಹತ್ವದ ಪಾತ್ರವಹಿಸಬೇಕೆಂದರು.
ನಂತರ ಅಂಗನವಾಡಿ, ಆಶಾ ಕಾರ್ಯರ್ತರು, ಆರೋಗ್ಯ ಸಹಾಯಕಿಯರು ಕಿರಿಯ ಆರೋಗ್ಯ ಸಹಾಕರ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಿದರು. ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಸರಿಯಾಗಿ ಭೇಟಿ ನೀಡುತ್ತಿರುವ ಕುರಿತು ತಿಳಿದುಕೊಳ್ಳಲು ದಾಖಲೆಗಳನ್ನು ಪರಿಶೀಲಿಸಿದರು. ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತು ಗ್ರಾಮಸ್ಥರನ್ನು ವಿಚಾರಿಸಿದರು, ಗ್ರಾಮಸ್ತರು ತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಪವಾಡ್ಯಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಅಮರಗುಂಡಪ್ಪ, ಜಿಲ್ಲಾ ಎನ್ವಿಬಿಡಿಸಿಪಿ ಬಸವರಾಜ, ಕೀಟಶಾಸ್ತ್ರಜ್ಞ ಪರಶುರಾಮ, ಲಿಂಗಸುಗೂರು ತಾಲ್ಲೂಕು ಪ್ರಭಾರ ಆರೋಗ್ಯ ಅಧಿಕಾರಿ ಡಾ. ಗೌರಿಶಂಕರ, ಪರಮೇಶ್ವರಪ್ಪ, ಹಟ್ಟಿ ಆರೋಗ್ಯ ಅಧಿಕಾರಿ ಡಾ. ವೀರೇಶ ಮತ್ತು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.