ADVERTISEMENT

ಯುವ ಸಮುದಾಯದ ಸಕಾರಾತ್ಮಕ ಚಿಂತನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 7:50 IST
Last Updated 7 ಆಗಸ್ಟ್ 2012, 7:50 IST

ರಾಯಚೂರು: ರಾಜಕೀಯ ಕ್ಷೇತ್ರ ಸರಿ ಇಲ್ಲ ಎಂದು ಪ್ರಜ್ಞಾವಂತ, ಯುವ ಸಮುದಾಯ ಎಲ್ಲರೂ ಅದರಿಂದ ದೂರ ಇದ್ದು ಬಿಟ್ಟರೆ ಬದಲಾವಣೆ ಸಾಧ್ಯವಿಲ್ಲ. ಸಕಾರಾತ್ಮಕ ಚಿಂತನೆ, ಅಭಿವೃದ್ಧಿಯ ಬಗ್ಗೆ ಕನಸು ಹೊತ್ತವರು ಬದಲಾವಣೆ ಪ್ರಕ್ರಿಯೆಗೆ ಮೊದಲು ಹೆಜ್ಜೆ ಇರಿಸಬೇಕಾದುದು ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಾಗಿದೆ ಎಂದು ಚಿತ್ರನಟಿ ಹಾಗೂ ಸಮಾಜಸೇವಕಿ ಮಾಳವಿಕಾ ಅವಿನಾಶ್ ಹೇಳಿದರು.

ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಜಾತ್ಯತೀತ ಜನತಾ ದಳ (ಜೆಡಿಎಸ್) ಜಿಲ್ಲಾ ಯುವ ಘಟಕವು ಆಯೋಜಿಸಿದ್ಧ `ಪ್ರಸ್ತುತ ರಾಜಕಾರಣದಲ್ಲಿ ಯುವಕರ ಪಾತ್ರ~ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ಯುವ ಸಮುದಾಯವು ಸಮಾಜದಲ್ಲಿ ಪರಿವರ್ತನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರೋಗ್ಯಯುತ ಚಿಂತನೆ ಹೊಂದಿದ್ದರೆ ಈ ದೇಶದ ಪ್ರಗತಿಗೆ ದಿಕ್ಸೂಚಿಯಾಗುತ್ತದೆ. ಜಾತ್ಯತೀತ ಜನತಾ ದಳದ ಯುವ ಘಟಕವು ಈ ಸಂವಾದ ಕಾರ್ಯಕ್ರಮ ಆಯೋಜಿಸಿರುವುದು ಸೂಕ್ತವಾಗಿದೆ ಎಂದರು.

ರಾಜ್ಯದಲ್ಲಿ ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯವಿದ್ದು, ಅದು ಜೆಡಿಎಸ್ ಪಕ್ಷ. ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕನಿಷ್ಠ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿಪರ ಯೋಜನೆ ರೂಪಿಸಿದ ಹೆಗ್ಗಳಿಕೆ ಇದೆ ಎಂದು ಹೇಳಿದರು.

ಪಕ್ಷದ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ಚಂದ್ರಶೇಖರ, ಜಿಲ್ಲಾ ವಕ್ತಾರ ಎಂ ವಿರುಪಾಕ್ಷಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪವನಕುಮಾರ, ಜಿಲ್ಲಾ ಪಂಚಾಯಿತಿ ಸದಸ್ಯ ದಾನಪ್ಪ ಆಲ್ಕೋಡ, ಪಕ್ಷದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಯೂಸೂಫ್‌ಖಾನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.