ರಾಯಚೂರು: ಹದಗೆಟ್ಟಿರುವ ನಗರದ ಚಂದ್ರಮೌಳೇಶ್ವರ ವೃತ್ತದಿಂದ ಗಂಜ್ ವೃತ್ತದವರೆಗಿನ ರಸ್ತೆ( ಗಂಜ್ ರಸ್ತೆ) ಈಗ ಕಾಂಕ್ರಿಟ್ ರಸ್ತೆಯಾಗಿ ನಿರ್ಮಾಣಗೊಳ್ಳುತ್ತಿದ್ದು, ಮಂದಗತಿಯ ಕಾಮಗಾರಿ ನಡೆದಿರುವುದು, ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವುದು ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಮೂರು ವರ್ಷಗಳ ಹಿಂದೆ ಈ ರಸ್ತೆಯ ಒಂದು ಬದಿ ಕಾಲುಭಾಗ ಮಾತ್ರ ಕಾಂಕ್ರೀಟ್ ರಸ್ತೆಯಾಗಿ ನಿರ್ಮಾಣಗೊಳಿಸಲಾಗಿತ್ತು. ಬಳಿಕ ಈಗ ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಕ್ಕಪಕ್ಕದ ಕಟ್ಟಡ ತೆರವು ವಿಳಂಬವಾಯಿತು. ಕಾಮಗಾರಿ ಕೈಗೊಳ್ಳುವ ಬಗ್ಗೆ ಆಡಳಿತ ಯಂತ್ರದ ಉಪೇಕ್ಷೆಯಿಂದ ಈ ರಸ್ತೆ ನಿರ್ಮಾಣ ವಿಳಂಬಾಗಿತ್ತು. ಕೊನೆಗೂ ರಸ್ತೆ ನಿರ್ಮಾಣ ಆರಂಭಗೊಂಡಿದ್ದರೂ ಅಮೆ ವೇಗದಲ್ಲಿ ಕಾಮಗಾರಿ ನಡೆದಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಸದಾ ವಾಹನ ದಟ್ಟಣೆ, ಜನಸಂಚಾರದಿಂದ ಈ ರಸ್ತೆ ಕೂಡಿರುತ್ತದೆ. ಈ ರಸ್ತೆ ಒಂದು ಬದಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನೊಂದು ಬದಿಯಲ್ಲಿ ಇಲ್ಲ. ಈ ರಸ್ತೆಯಲ್ಲೇ ಮುಖಾಮುಖಿ ಸಂಚರಿಸುತ್ತಿದ್ದು, ನಿತ್ಯ ವಾಹನ ಸವಾರರಿಗೆ, ನಾಗರಿಕರಿಗೆ ಗೋಳಾಗಿದೆ.
ತಾಲ್ಲೂಕಿನ ಸುತ್ತಮುತ್ತಲಿನ ಬಹುತೇಕ ಹಳ್ಳಿಗಳ ಜನ, ಹೈದರಾಬಾದ್ ರಸ್ತೆ ಅಕ್ಕಪಕ್ಕದ ಬಡಾವಣೆ, ಎಪಿಎಂಸಿಗೆ ಹೋಗುವ ಕೆಲಸಗಾರರು, ರೈತರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಸಂಚಾರ ದಟ್ಟಣೆ ಏಕಾಏಕಿ ಹೆಚ್ಚಾಗಿದ್ದರಿಂದ ಜನ ಪರದಾಡಬೇಕಿದೆ.
ಪೊಲೀಸರು ಸಂಚಾರ ನಿಯಂತ್ರಣಕ್ಕೆ ಚಂದ್ರಮೌಳೇಶ್ವರ ವೃತ್ತ ಹಾಗೂ ರಸ್ತೆಯ ಕೆಲ ಕಡೆ ಇದ್ದರೂ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ನಿಯಂತ್ರಣ ಕಷ್ಟ. ವ್ಯಾಪಕ ದೂಳು, ವಾಹನಗಳು ಹೊರಸೂಸುವ ಹೊಗೆ ಸಾರ್ವಜನಿಕರಿಗೆ ತೊಂದೆಯಾಗುತ್ತಿದೆ. ಕೂಡಲೇ ಈ ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಆಡಳಿತ ವರ್ಗ, ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಕಾಮಗಾರಿ ಬೇಗ ಮುಗಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಾಗರಿಕ ರಾಜಶೇಖರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.