ADVERTISEMENT

ರಸ್ತೆ ಸುಧಾರಣೆಗೆ ಶೀಘ್ರ ಕ್ರಮ: ಶಾಸಕ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:25 IST
Last Updated 3 ಸೆಪ್ಟೆಂಬರ್ 2011, 6:25 IST

ಭಾಲ್ಕಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ರಸ್ತೆಗಳ ಸುಧಾರಣೆಗೆ ಕ್ರಮ ಜರುಗಿಸಲಾಗುವುದು. ಬರುವ ಫೆಬ್ರುವರಿ ಒಳಗಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುವದಾಗಿ ಶಾಸಕ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. 

 `ಇವು ರಸ್ತೆಗಳೋ... ತಿಪ್ಪೆ ಗುಂಡಿಗಳೋ..~ ಎಂಬ ಶಿರೋನಾಮೆ ಅಡಿಯಲ್ಲಿ ಬುಧವಾರ `ಪ್ರಜಾವಾಣಿ~ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು.

ಭಾಲ್ಕಿ ಅನೇಕ ಬಡಾವಣೆಗಳಲ್ಲಿ ರಸ್ತೆಗಳು ತೀರಾ ಹದಗೆಟ್ಟಿವೆ. ಹಳೆಯ ಭಾಗದಲ್ಲಿ ರಸ್ತೆ ವಕಾರ್ಯ ನಡೆಯುತ್ತಿದೆ. ವಿದ್ಯುತ್ ಕಂಭಗಳ ಸ್ಥಳಾಂತರ ಕಾರ್ಯ ತೀವ್ರವಾಗಿ ಜರುಗಿಸಲಾಗುತ್ತಿದೆ. ಚರಂಡಿ ನಿರ್ಮಾಣವೂ ಕೊನೆಯ ಹಂತದಲ್ಲಿದ್ದು ಸಂಪೂರ್ಣ ಸ್ವಚ್ಛ ರಸ್ತೆಗಾಗಿ ರೂ. 85 ಲಕ್ಷ  ಬಿಡುಗಡೆ ಮಾಡಿಸಿ ಬರುವ ಫೆಬ್ರುವರಿ ಒಳಗಾಗಿ ಕೆಲಸ ಪೂರ್ಣಗೊಳಿಸುವುದಾಗಿ ಶಾಸಕ ಖಂಡ್ರೆ ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಅಂಬೇಡ್ಕರ್ ವೃತ್ತದಿಂದ ವಿವೇಕಾನಂದ ಚೌಕ್ ವರೆಗಿನ ರಸ್ತೆ ನಿರ್ಮಾಣಕ್ಕೆ 1.50ಕೋಟಿ ರೂ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಕ್ಷಣವೇ ಈ ಮಾರ್ಗದ ತಗ್ಗುಗಳನ್ನು ಭರ್ತಿ ಮಾಡಲು 5ಲಕ್ಷ ರೂ ಬಿಡುಗಡೆ ಮಾಡಿಸಲಾಗಿದ್ದು, ಎರಡು ವಾರದೊಳಗೆ ಆ ಕೆಲಸ ಮುಗಿಯಲಿದೆ ಎಂದು ತಿಳಿಸಿದ್ದಾರೆ.

ಭಾಲ್ಕಿಯ ರೇಲ್ವೆ ಸ್ಟೇಷನ್‌ನಿಂದ ಜ್ಯೋಶಿನಗರ, ಸರಾಫ್ ಬಜಾರ್, ಭೀಮನಗರ, ಬಸ್ ನಿಲ್ದಾಣದ ಮಾರ್ಗದಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ 70 ಲಕ್ಷ ಮಂಜೂರಾಗಿದ್ದು, ಟೆಂಡರ್ ಕೂಡ ಆಗಿದೆ. ಮಳೆಗಾಲ ಮುಗಿದ ಕೂಡಲೇ ಕೆಲಸಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.