ADVERTISEMENT

ಲಿಖಿತ ಭರವಸೆ: ಅಹೋರಾತ್ರಿ ಸತ್ಯಾಗ್ರಹ ಅಂತ್ಯ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 8:30 IST
Last Updated 14 ಆಗಸ್ಟ್ 2012, 8:30 IST

ಹಟ್ಟಿ ಚಿನ್ನದ ಗಣಿ: ಉದ್ಯೋಗ ಖಾತರಿ ಯೋಜನೆಯಡಿ ಮಾಡಿದ ಕೆಲಸಕ್ಕೆ ಬಾಕಿ ಇರುವ  ಕೂಲಿ ಹಣ ಪಾವತಿಸುವಂತೆ ಒತ್ತಾಯಿಸಿ ಇಲ್ಲಿಯ ಜನವಾದಿ ಮಹಿಳಾ ಸಂಘಟನೆ ಕಳೆದ ಐದು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ ಸೋಮವಾರ ಲಿಖಿತ ಭರವಸೆ ಪಡೆದುಕೊಂಡು ಅಂತ್ಯಗೊಳಿಸಲಾಯಿತು.

ಇಲ್ಲಿಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸಫ್ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿ ದಾಖಲೆಗಳ ಪ್ರಕಾರ 5.64 ಲಕ್ಷ ರೂಪಾಯಿ ಕೂಲಿ ನೀಡುವುದಾಗಿ ಹೇಳಿದರು. ಈಗಾಗಲೇ ಈ ವಿಷಯ ಕುರಿತು ತಾಲ್ಲೂಕು ಪಂಚಾಯಿತು ಎದುರು ಅಹೋರಾತ್ರಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ  ಕಿರಿಯ ಎಂಜಿನಿಯರ್ ಅಚುತ್ ರಾವ್ ಅವರು 8 ಲಕ್ಷ ರೂಪಾಯಿಗಳ ಕೆಲಸ ನಡೆದಿದೆ ಎಂದು ಎಂ.ಬಿ. ದಾಖಲೆಯಲ್ಲಿ ಬರೆದಿದ್ದಾರೆ. ಈಗ 5.6 ಲಕ್ಷ ರೂಪಾಯಿತಿ ಕೆಲಸ ಆಗಿದೆ ಎಂದರೆ ಒಪ್ಪುವುದಿಲ್ಲ ಎಂದು ಮುಖಂಡರಾದ ಮಲ್ಲಯ್ಯ ಜಾಲಹಳ್ಳಿ, ಕೆ. ಶಿವಾನಂದ,  ಎಸ್. ಸರಸ್ವತಿ, ರಂಗನಾಥ ಪಟ್ಟು ಹಿಡಿದರು.

ನಂತರ ಗ್ರಾಮ ಪಂಚಾಯತಿ ಪಿಡಿಒ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಮ್ಮುಖದಲ್ಲಿ ಆಗಸ್ಟ್ 16ರಂದು ಚೆಕ್ ಮೂಲಕ 7.64 ಲಕ್ಷ ಕೂಲಿ ಹಣ ನೀಡುವುದಾಗಿ ಹೇಳಿ ಲಿಖಿತ ಭರವಸೆ ನೀಡಿದ ನಂತರ ಸತ್ಯಾಗ್ರಹ ಮುಕ್ತಾಯಗೊಳಿಸಿದರು.

ADVERTISEMENT

ತರಾಟೆ: ಮೌಖಿಕವಾಗಿ ಕೆಲಸದ ಸ್ಥಳಕ್ಕೆ ಹೋಗಿ ಅಳತೆ ಮಾಡದ ಕಾರಣ ಲೆಕ್ಕದಲ್ಲಿ ವ್ಯತ್ಯಾಸ ಉಂಟಾಗಿದೆ. ಎಂ.ಬಿ. ದಾಖಲೆ ತಿದ್ದಿದಲ್ಲದೇ ಒಂದೇ ಕೆಲಸಕ್ಕೆ ಎರಡು ಎಂ.ಬಿ. ದಾಖಲೆಗಳನ್ನು ಸೃಷ್ಟಿಸಿರುವುದಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಿಯ ಎಂಜಿನಿಯರ್ ಅಚುತ್ ರಾವ್ ಹಾಗೂ ಪಿಡಿಒ ನಜೀರ್ ಸಾಬ್ ಇವರನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ಸಹಾಯಕ ಎಂಜಿನಿಯರ್ ಸಿ.ಎಸ್. ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಚ್. ಕೊಪ್ಪರದ್, ಹಟ್ಟಿ ಗ್ರಾಪಂ. ಅಧ್ಯಕ್ಷ ಜಿ. ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.