ADVERTISEMENT

ವಚನ ಸಾಹಿತ್ಯ ದಾರಿದೀಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:00 IST
Last Updated 7 ಫೆಬ್ರುವರಿ 2012, 9:00 IST

ಸಿಂಧನೂರು: ಸನ್ಮಾರ್ಗದತ್ತ ಸಾಗಲು ವಚನ ಸಾಹಿತ್ಯ ದಾರಿದೀಪ ಎಂದು ನಾಯಕನಹಟ್ಟಿಯ ಓಂ ವೃಕ್ಷವೃದ್ಧಿ ಯೋಗಾಶ್ರಮದ ತಿಪ್ಪೆರುದ್ರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಕುರುಕುಂದಾ ಗ್ರಾಮದಲ್ಲಿ ಭಾನುವಾರ ವಚನ ಸಂದೇಶ ಹಾಗೂ ಹಸಿರು ಜಾಗ್ರತಿ ಪಾದಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂತರಂಗ ಶುದ್ಧಿಗೆ ವಚನ ಸಾಹಿತ್ಯ, ಬಹಿರಂಗ ಶುದ್ಧಿಗೆ ಹಸಿರು ಜಾಗ್ರತಿ ಬಹುಮುಖ್ಯವಾಗಿದೆ. ಇತರರ ಅಂಕುಡೊಂಕುಗಳನ್ನು ಹೇಳುವ ಮೊದಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಕೆಲಸ ಮೊದಲು ಆಗಬೇಕು. ಅಂದಾಗ ಸುತ್ತಲೂ ನೆಮ್ಮದಿ ತುಂಬಿಕೊಳ್ಳುತ್ತದೆ ಎಂದು ಹೇಳಿದರು.

ಮೈಸೂರಿನ ಬಸವಧ್ಯಾನ ಮಂದಿರದ ಬಸವಲಿಂಗಮೂರ್ತಿ ಶರಣರು ಮಾತನಾಡಿ ಕಲುಷಿತಗೊಳ್ಳುತ್ತಿರುವ ಸಮಾಜಕ್ಕೆ ವಚನಗಳು ಔಷಧಿ ಎಂದು ಹೇಳಿದರು. ಪೂರ್ಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ನವಲಿ, ಕಾರ್ಯಾಧ್ಯಕ್ಷ ಶರಣಪ್ಪ ಪೊ.ಪಾ, ರಾಮನಗೌಡ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಮಣ್ಣ ಪೂಜಾರಿ, ಶರಣಪ್ಪ ಹಳ್ಳಿ, ಖಜಾಂಚಿ ಅಮರೇಶ ಪಗಡದಿನ್ನಿ, ಶರಣಪ್ಪ ಕುಂಬಾರ, ಬೂದೆಯ್ಯಸ್ವಾಮಿ, ಹನುಮಯ್ಯ ಗುತ್ತೇದಾರ, ಶರಣಪ್ಪ ಹಡಪದ, ಹನುಮನಗೌಡ ಕಾಸರಡ್ಡಿ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.