ADVERTISEMENT

`ವಸತಿ ನಿಲಯ: ಸುವ್ಯವಸ್ಥೆಗೆ ಕ್ರಮ'

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 7:06 IST
Last Updated 20 ಜುಲೈ 2013, 7:06 IST

ಮಾನ್ವಿ: ಪಟ್ಟಣದಲ್ಲಿರುವ ವಿವಿಧ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜಾ ವಸಂತ ನಾಯಕ ಹೇಳಿದರು.

ಶುಕ್ರವಾರ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರಿನ ಸ್ನಾನಕ್ಕಾಗಿ ಸೌರ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ. ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇನ್ವರ್ಟ್‌ರ್‌ಗಳನ್ನು ಅಳವಡಿಸಲಾಗಿದೆ ಎಂದು  ತಿಳಿಸಿದರು. ಪಟ್ಟಣದಲ್ಲಿರುವ ಎರಡು ವಸತಿ ನಿಲಯ ಹಾಗೂ ಅಡವಿ ಅಮರೇಶ್ವರದಲ್ಲಿರುವ ವಸತಿ ನಿಲಯಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ 30ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಜೋಷಿ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಅಂಜಿನಮ್ಮ, ತಾಪಂ  ಸದಸ್ಯರಾದ ದೇವರಾಜ ಉಟಕನೂರು, ಗೌಡಪ್ಪ ಗೌಡ ಹಾಗೂ ಅರ್ಜುನಪ್ಪ ಬಲ್ಲಟಗಿ, ಮುಖಂಡ ಗುರಪ್ಪ ಚಂದ್ರಡ್ಡಿ ಬಾಗಲವಾಡ ಇದ್ದರು.

`ನ್ಯಾಯಮೂರ್ತಿ ನೇಮಿಸಿ'
ಮಾನ್ವಿ: ಕಳೆದ ಒಂದು ವರ್ಷದಿಂದ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಮೂರ್ತಿ ಹುದ್ದೆ ಖಾಲಿ ಇರುವುದರಿಂದ ಹಲವು ವ್ಯಾಜ್ಯಗಳು ಇತ್ಯರ್ಥವಾಗಿಲ್ಲ. ಕಾರಣ ರಾಜ್ಯ ಸರ್ಕಾರ ಆಯೋಗದ  ನ್ಯಾಯಮೂರ್ತಿ ನೇಮಕಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಲಿ ಭಾರತ ಮಾನವ ಹಕ್ಕುಗಳ ಸಂಘದ ರಾಜ್ಯ ಘಟಕದ ಮುಖ್ಯಸ್ಥ ಪಿ.ಮೋಹನ ಬಾಬು ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಂಘದ ಮಾನ್ವಿ ತಾಲ್ಲೂಕು ಘಟಕದ ಮುಖ್ಯಸ್ಥರನ್ನಾಗಿ ಕೆ.ಶ್ರೀನಿವಾಸಕುಮಾರ ಮತ್ತಿತರ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದರು.

ಕೆ.ಶ್ರೀನಿವಾಸಕುಮಾರ, ವೀರನಗೌಡ ಪೋತ್ನಾಳ, ಸೂಗನಗೌಡ, ಎಚ್.ಶರ್ಪುದ್ದೀನ್ ಪೋತ್ನಾಳ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.