ADVERTISEMENT

ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಚುರುಕು

ಮತ ಯಂತ್ರಗಳ ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 13:16 IST
Last Updated 13 ಏಪ್ರಿಲ್ 2018, 13:16 IST

ರಾಯಚೂರು: ಮತದಾರನು ಚಲಾಯಿಸುವ ಮತವನ್ನು ಖಾತರಿಗೊಳಿಸುವುದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಬಳಕೆ ಮಾಡುತ್ತಿರುವ ವಿವಿಪ್ಯಾಟ್ (ವಿವಿಪಿಎಟಿ- ವೋಟರ್ ವೈರಿಫೈಡ್ ಪೇಪರ್ ಆಡಿಟ್ ಟ್ರೈಲ್) ಹೇಗಿರುತ್ತದೆ ಎಂಬುದನ್ನು ಜನಸಾಮಾನ್ಯರಲ್ಲಿ ಪ್ರಾಯೋಗಿಕವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವ ಸ್ಥಳಗಳಲ್ಲಿ ವಿವಿಪ್ಯಾಟ್ ಯಂತ್ರ ಇರಿಸಲಾಗಿದ್ದು, ವಿದ್ಯುನ್ಮಾನ ಯಂತ್ರ (ಇವಿಎಂ)ದೊಂದಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದು ಗಮನ ಸೆಳೆಯುತ್ತಿದೆ. ಮತದಾನ ದಿನದಂದು ಗೊಂದಲ ಮೂಡುವುದನ್ನು ತಪ್ಪಿಸಲು ಹಾಗೂ ವಿದ್ಯುನ್ಮಾನ ಯಂತ್ರ (ಇವಿಎಂ) ಮತದಾನವು ನಿಖರವಾಗಿರುತ್ತದೆ ಎಂಬುದನ್ನು ಪ್ರತ್ಯೇಕ್ಷವಾಗಿ ತೋರಿಸಲಾಗುತ್ತಿದೆ.

ರಾಯಚೂರಿನ ಕೇಂದ್ರ ಬಸ್ ನಿಲ್ದಾಣ, ಗಂಜ್ ಪ್ರದೇಶ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಧಿಕಾರಿಗಳ ತಂಡವು ವಿವಿಪ್ಯಾಟ್ ಮೂಲಕ ಮತದಾನ ಮಾಡುವ ವಿಧಾನವನ್ನು ವಿವರಿಸಿದರು. ಇದೇ ರೀತಿ ತಾಲ್ಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳಲ್ಲೂ ಏಕಕಾಲಕ್ಕೆ ವಿವಿಪ್ಯಾಟ್ ಜಾಗೃತಿ ಮೂಡಿಸುವ ಕೆಲಸ
ನಡೆದಿದೆ.

ADVERTISEMENT

ಈ ಹಿಂದೆ ಮತದಾನ ಮಾಡಿರುವಂತೆಯೇ ಈಗಲೂ ಮತದಾನ ಮಾಡುವ ಪದ್ಧತಿ ಇರಲಿದೆ. ಆದರೆ ಮತದಾನದ ಗುಂಡಿ ಒತ್ತಿದ ಬಳಿಕ, ಅದು ಯಾವ ಗುರುತಿಗೆ ತೆಗೆದುಕೊಂಡಿದೆ ಎಂಬುದನ್ನು ಖಾತರಿ ಮಾಡುವುದಕ್ಕಾಗಿ ವಿವಿಪ್ಯಾಟ್ ಎನ್ನುವ ಹೊಸ ಯಂತ್ರವನ್ನು ಈ ಬಾರಿ ಬಳಕೆ ಮಾಡಿದ್ದಾರೆ. ಮತಗುಂಡಿಯನ್ನು ಒತ್ತಿದ ಬಳಿಕ ಮತ ಯಾರಿಗೆ ಚಲಾವಣೆ ಆಗಿದೆ ಎಂಬುದು ವಿವಿಪ್ಯಾಟ್ ಯಂತ್ರದಲ್ಲಿ ಪ್ರದರ್ಶನವಾಗುತ್ತದೆ. ಅದು ಏಳು ಸೆಕೆಂಡ್‌ವರೆಗೂ ಮಾತ್ರ ಕಾಣಿಸಿಕೊಳ್ಳುತ್ತದೆ. ಮತ
ದಾನ ಮಾಡಿರುವುದು ಸರಿಯಾಗಿದೆ ಎಂಬುದನ್ನು ಖಾತರಿ ಮಾಡಿಕೊಳ್ಳಬಹುದು. ವಿವಿಪ್ಯಾಟ್ ಯಂತ್ರವನ್ನು ಮತದಾರನು ಮಾತ್ರ ನೋಡುವುದಕ್ಕೆ ಅವಕಾಶ
ಇರುತ್ತದೆ.

‘ಚುನಾವಣೆ ಮತದಾನ ನಡೆಯುವ ಮೊದಲೇ ಮತ ಹಾಕುವಾಗ ಯಂತ್ರವು ಹೇಗಿರುತ್ತದೆ ಎನ್ನುವುದನ್ನು ಹೇಳಿದ್ದು ಒಳ್ಳೆಯದಾಯಿತು. ಇದರಿಂದ ಮತದಾನ ಮಾಡುವ ದಿನ ಯಾವುದೇ ಸಂಶಯ ಹುಟ್ಟುವುದಿಲ್ಲ. ಯಾವ ಯಂತ್ರವಿದೆ? ನಾವು ಅದರಲ್ಲಿ ಯಾವುದನ್ನು ಒತ್ತಬೇಕು ಎಂದು ಬಹಳ ಜನರಿಗೆ ಗೊತ್ತಾಗುವುದಿಲ್ಲ. ಬಡಾವಣೆಗಳಲ್ಲಿಯೇ ಹೊಸ ಯಂತ್ರವನ್ನು ತೋರಿಸುತ್ತಿರುವುದರಿಂದ ಜನರಿಗೆ ಮತ ಹಾಕುವುದಕ್ಕೆ ಗೊಂದಲ ದೂರಾಗುತ್ತಿದೆ. ಅಧಿಕಾರಿಗಳು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಬೇರೂನ್ ಕಿಲ್ಲಾ ನಿವಾಸಿ ರಾಮಣ್ಣ ತಿಳಿಸಿದರು.

**

ವಿವಿಪ್ಯಾಟ್ ಬಳಕೆಯಿಂದ ಮತದಾರನು ತನ್ನ ಮತವನ್ನು ಯಾರಿಗೆ ಚಲಾಯಿಸಿದ್ದೇನೆ ಎಂಬುದನ್ನು ತಕ್ಷಣವೇ ನೋಡುವುದಕ್ಕೆ ಸಾಧ್ಯವಾಗುತ್ತದೆ – ಡಾ. ಬಗಾದಿ ಗೌತಮ್,ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.