ADVERTISEMENT

ವ್ಯಾಪಕ ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 11:14 IST
Last Updated 21 ಜೂನ್ 2013, 11:14 IST

ಸಿಂಧನೂರು: ನಗರಾದ್ಯಂತ ಬುಧವಾರ ಸಂಜೆ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ಸುರಿದ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗೆ ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ನಗರದ ಖದರೀಯ ಕಾಲೋನಿ, ಹೌಸಿಂಗ್ ಕಾಲೋನಿ, ವೆಂಕಟರಾವ್ ಕಾಲೋನಿ, ನಟರಾಜ ಕಾಲೋನಿ ಮತ್ತಿತರ ಕಡೆಗಳಲ್ಲಿ ಮಳೆಯಿಂದ ಚರಂಡಿ ತುಂಬಿ ರಸ್ತೆ ಮೇಲೆ ಹರಿಯಿತು. ಇನ್ನು ಮುಖ್ಯರಸ್ತೆಯ ಕಿತ್ತೂರು ಚನ್ನಮ್ಮ ವೃತ್ತದಿಂದ ಕನಕದಾಸ ವೃತ್ತದವರೆಗೆ ರಸ್ತೆ ತುಂಬ ಚರಂಡಿ ನೀರು ಮೊಳಕಾಲೆತ್ತರದಲ್ಲಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು. ಚರಂಡಿಯ ಗಲೀಜು ಸಂಪೂರ್ಣ ರಸ್ತೆಯ ಮೇಲೆ ಹರಿಯಿತು. ತ್ಯಾಜ್ಯಗಳು ರಸ್ತೆ ಮೇಲೆ ಹಾಗೆ ಬಿದ್ದಿದ್ದು ಕಂಡುಬಂತು.

ಅದೇ ರೀತಿ ನಿರ್ಮಾಣ ಹಂತದಲ್ಲಿರುವ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಸಂಗ್ರಹಗೊಂಡ ಭಾರಿ ಪ್ರಮಾಣದ ನೀರು ವೆಂಕಟರಾವ್ ಕಾಲೋನಿಗೆ ನುಗ್ಗಿದ್ದರಿಂದ ನಿವಾಸಿಗಳು ಆತಂಕ ಪಟ್ಟರು.ಇಷ್ಟೆಲ್ಲ ಸಮಸ್ಯೆ ಉಂಟಾದರೂ ನಗರಸಭೆಯ ಯಾವೊಬ್ಬ ಅಧಿಕಾರಿಯೂ ನೆರವಿಗೆ ಬರಲಿಲ್ಲ. ಎಲ್ಲರೂ ತಮ್ಮ ಫೋನ್‌ಗಳನ್ನು ಸ್ವಿಚ್‌ಆಫ್ ಮಾಡಿಕೊಂಡು ತಣ್ಣಗೆ ಕುಳಿತಿದ್ದಾರೆ ಎಂದು ಸ್ಥಳೀಯರಾದ ಜಗದೀಶ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಚಂದ್ರಶೇಖರ ಮೈಲಾರ, ಶಿವರುದ್ರಗೌಡ ಉಪ್ಪಳ, ಮಲ್ಲಪ್ಪ ದಸ್ತಾವೇಜು ಮತ್ತಿತರರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.