ಲಿಂಗಸುಗೂರು: ತಾಲ್ಲೂಕಿನ ಗುರುಗುಂಟಾದ ಅಮರೇಶ್ವರ ದೇವರ ಕಾರ್ತಿಕೋತ್ಸವ ನಿಮಿತ್ತ ಲಕ್ಷ ದೀಪೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಹೊಂಡದಲ್ಲಿ ಸ್ನಾನ ಮಾಡಿಕೊಂಡು ಅಮರೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ಪೂಜಾ ಕೈಂಕರ್ಯ ನೆರವೇರಿಸಿದರು.
ಗುರುಮಠದಿಂದ ಅಮರೇಶ್ವರ ಗುರು ಅಭಿನವ ಗಜದಂಡ ಶಿವಯೋಗಿಗಳ ನೇತೃತ್ವದಲ್ಲಿ ವೀಳ್ಯದೆಲೆ ಚೆಟ್ಟನ್ನು ಸಾಂಪ್ರದಾಯಿಕವಾಗಿ ಪುವಂತರ ಸಹಯೋಗದಲ್ಲಿ ತಂದು ಅಮರೇಶ್ವರ ದೇವರಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರು ದೀಪ ಹಚ್ಚಿದ ಆಕಾಶ ಬುಟ್ಟಿಗಳನ್ನು ಆಕಾಶಕ್ಕೆ ಹಾರಿಸಿ ಜಯಘೋಷ ಹಾಕಿದರು.
ಪ್ರತಿ ವರ್ಷ 2 ಆಕಾಶಬುಟ್ಟಿಗಳನ್ನು ಹಾರಿಸುವುದು ವಾಡಿಕೆ. ಈ ವರ್ಷ ಹಾರಿಸಲಾದ ಆಕಾಶಬುಟ್ಟಿಗಳು ಹೆಚ್ಚು ಮೇಲೆ ಹೋಗದೆ ದೇವಸ್ಥಾನದ ಸುತ್ತಮುತ್ತ ನೆಲಕ್ಕಪ್ಪಳಿಸಿದವು. ಹೀಗಾಗಿ ಭಕ್ತರು ಅಪಶಕುನ ಎಂದು ಮಾತಾಡಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಮುಖ್ಯ ಅರ್ಚಕ ಗಂಗಾಧರ ಶಾಸ್ತ್ರಿ, ‘ಈ ವರ್ಷ ಆಕಾಶ ಬುಟ್ಟಿಗಳನ್ನು ಯುವಕರು ಸಿದ್ಧಪಡಿಸಿದ್ದಾರೆ. ಅನುಭವದ ಕೊರತೆ, ಸಿದ್ಧಪಡಿಸುವಲ್ಲಿ ಆಗಿರುವ ಲೋಪದಿಂದಾಗಿ ಬುಟ್ಟಿ ಹೆಚ್ಚು ಮೇಲೆ ಹೊಗಿಲ್ಲ. ಇದು ಅಪಶಕುನ ಎಂದು ಭಾವಿಸುವುದು ಬೇಡ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.