ಸಿರವಾರ: ಚರಂಡಿ, ಸಿಸಿ ರಸ್ತೆ ಮತ್ತು ಶಾಲೆಯ ಮಕ್ಕಳಿಗೆ ಕೊಠಡಿಗಳ ಕೊರತೆ ಜತೆಗೆ ಮೂಲಸೌಕರ್ಯಗಳಿಂದ ವಂಚಿತ ವಾಗಿದೆ ಜಕ್ಕಲದಿನ್ನಿ ಗ್ರಾಮ. ಅತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಈ ಗ್ರಾಮದಲ್ಲಿ 360 ಮನೆಗಳಿದ್ದು, 4,000 ಜನ ಸಂಖ್ಯೆ, 2 ವಾರ್ಡ್, ಐವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.
ಚರಂಡಿಯಾಗಲೀ, ಸಿಸಿ ರಸ್ತೆಯಾಗಲಿ ಗ್ರಾಮದಲ್ಲಿ ಇಲ್ಲದ ಕಾರಣ ಪ್ರತಿ ಮನೆಯ ಸುತ್ತ ಚರಂಡಿ ನೀರು ಸಂಗ್ರಹವಾಗಿ, ಸಾಂಕ್ರಮಿಕ ರೋಗಗಳ ತಾಣವಾಗಿದೆ.
2015-16 ನೇ ಸಾಲಿನಲ್ಲಿ ಶಾಸಕರ ಸುವರ್ಣ ಗ್ರಾಮ ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಿರವಾರ ಪಟ್ಟಣದಿಂದ ಕೊಳವೆ ಬಾವಿಯಿಂದ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತಿದೆ.
ಈ ನೀರನ್ನು ಸಂಗ್ರಹಿಸಲು 2013-14 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₹ 26 ಲಕ್ಷ ವೆಚ್ಚದಲ್ಲಿ ನೀರು ಸಂಗ್ರಹ ತೊಟ್ಟಿ ನಿರ್ಮಾಣವಾಗಿದ್ದರೂ, ಪೈಪ್ ಲೈನ್ ಮಾಡದೆ ನಿರುಪಯುಕ್ತವಾಗಿ ಶಿಥಿಲಾವಸ್ಥೆ ತಲುಪಿದೆ.
ಕುಡಿಯುವ ನೀರು ಸರಬರಾಜಾಗುವ ನಲ್ಲಿಗಳು ತಗ್ಗು ಪ್ರದೇಶದಲ್ಲಿ ಇದ್ದು, ಅದರ ಸುತ್ತ ಗಲೀಜು ನೀರು ಸಂಗ್ರಹವಾಗಿ ಅಸ್ವಚ್ಛತೆ ತಾಂಡವಾಡುತ್ತಿದೆ. ಗ್ರಾಮದಲ್ಲಿ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ 1ನೇ ತರಗತಿಯಿಂದ 8 ತರಗತಿಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಶಾಲೆ ಕಟ್ಟಡದಲ್ಲಿ 5 ಕೊಠಡಿಗಳಿದ್ದು, ಅದರಲ್ಲಿ 1 ಕೊಠಡಿ ಶಾಲೆ ಕಚೇರಿಗೆ ಉಪಯೋಗ ಮಾಡುತ್ತಿದೆ.
ನಾಲ್ಕು ಕೊಠಡಿಗಳಲ್ಲಿ ಆರು ತರಗತಿಗಳನ್ನು ನಡೆಸಿದರೆ, ಎರಡು ತರಗತಿ ಮಕ್ಕಳಿಗೆ ಶಾಲೆಯ ಬಯಲಿನಲ್ಲಿ ಪಾಠ ಮಾಡಲಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಕೆಲವರು ಶೌಚಾಲಯ ನಿರ್ಮಿಸಿ ಕೊಂಡಿದ್ದು, ಅವುಗಳಿಗೆ ಹಣ ಬಿಡುಗಡೆ ಆಗದೇ ಇರುವುದರಿಂದ ಉಳಿದ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.