ADVERTISEMENT

ಸಾಲ ಎಲ್ಲಿಂದ ಕಟ್ಬೇಕು, ಹೊಟ್ಟೆಗೆ ಏನ್ ತಿನ್ನಬೇಕು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 8:40 IST
Last Updated 20 ಏಪ್ರಿಲ್ 2012, 8:40 IST

ಸಿಂಧನೂರು: ಇದು ಸಿಂಧನೂರು ತಾಲ್ಲೂಕಿನ ಕನ್ನಾರಿ ಗ್ರಾಮದ ರೈತ ನರಸಪ್ಪನ ಒಳಗುದಿ.
ಬುಧವಾರ ಸಂಜೆ ಗುಡುಗು, ಸಿಡಿಲು ಕೋಲ್ಮಿಂಚುಗಳ ಭರಾಟೆಯಲ್ಲಿ ಬೋರ್ಗರೆದ ಆಲಿಕಲ್ಲು ಮಳೆಯಿಂದ ಮಲದಿನ್ನಿ, ಡಿ.ಕಾತರಕಿ ಸೀಮಾದಲ್ಲಿರುವ ಸರ್ವೆ ನಂ3ರಲ್ಲಿ ಬರುವ 3ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದ ಬತ್ತದ ಕಾಳುಗಳು ಸಂಪೂರ್ಣ ಉದುರಿಬಿದ್ದು ಬರೀ ಹುಲ್ಲು ಮಾತ್ರ ಕಾಣುತ್ತಿರುವ ಹೊಲದಲ್ಲಿ ನಿಂತು ನರಸಪ್ಪ ತನ್ನ ಗೋಳನ್ನು ತೋಡಿಕೊಂಡನು.
 
ಇರುವ 3ಎಕರೆ ಜಮೀನಿನಲ್ಲಿ ಬತ್ತ ಬೆಳೆಯಲು ಸಾಲ ಮಾಡಿ ಬೀಜ, ಗೊಬ್ಬರ, ಎಣ್ಣೆ ಹಾಕಿ ಬೆಳೆಸಿದ ಬೆಳೆಯನ್ನು ಆಲಿಕಲ್ಲು ಮಳೆ ಬಂದು ನುಂಗಿ ಹಾಕಿಬಿಟ್ಟಿತು. ಸಾಲ್ದವರಿಗೆ ಏನು ಕೊಡ್ಬೇಕು, ಹೊಟ್ಟೆಗೆ ಏನ್ ತಿನ್ನಬೇಕು ಒಂದೂ ತಿಳಿದಂಗಾಗೈತ್ರೀ ಎಂದು ತಲೆಯ ಮೇಲೆ ಕೈಇಟ್ಟುಕೊಂಡು ದುಃಖಿಸುವ ನರಸಪ್ಪನ ಸ್ಥಿತಿಯನ್ನು ಗ್ರಾಮಸ್ಥರು ನೋಡಿ ಮರುಗಿದರು.
 
ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಬತ್ತದ ಬೆಳೆ ನಾಶದ ಬಗ್ಗೆ ಒಂದೊಂದೆ ಕತೆಯನ್ನು ಹೇಳುತ್ತಿರುವುದು ರೈತರ ನೋವಿನ ಬದುಕನ್ನೇ ಅನಾವರಣಗೊಳಿಸಿದಂತಿತ್ತು. ರಾಮಣ್ಣ ಎನ್ನುವ ವ್ಯಕ್ತಿ ತಾನು ಬೆಳೆದ ಬತ್ತವೆಲ್ಲ ನೆಲಸಮವಾಗಿರುವುದರಿಂದ ತಿನ್ನಲು ಒಂದು ಕಾಳು ಇಲ್ಲದಂತಾಗಿದೆ. ಹೆಂಡತಿ ಮತ್ತು ಮಕ್ಕಳನ್ನು ಹೇಗೆ ಸಾಕಬೇಕು ಎಂಬುದೇ ಚಿಂತೆಯಾಗಿದೆ ಎಂದು ಹೇಳಿದನು.
 
2ಎಕರೆಯಲ್ಲಿ ಬೆಳೆದ ಬತ್ತವೆಲ್ಲ ನೆಲಕ್ಕೆ ಹಾಸಿದಂತೆ ಬಿದ್ದು ಹೋಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಪೀರಮ್ಮ ಶೋಕಿಸಿದಳು. 116ನೇ ಸರ್ವೆ ನಂಬರಿನ ತನ್ನ ಎರಡುವರೆ ಎಕರೆ ಜಮೀನಿನಲ್ಲಿ ಬೆಳೆಸಿದ ಬತ್ತ ಕೈಗೆಟುಕದಂತಾಗಿದೆ ಎಂದು ಹೇಮಾವತಿ ರಾಜಕೀಯ ಮುಖಂಡರ ಎದರುಗಡೆಯಲ್ಲಿ ತನ್ನ ಅಳಲು ತೋಡಿಕೊಂಡಳು.

ಬಸಪ್ಪ ಚಲುವಾದಿ, ಬಸವರಾಜ ಮಡಿವಾಳರ ಸ್ಥಿತಿಯೂ ಸಹ ಉಳಿದವರಿಗಿಂತ ಭಿನ್ನವಾಗಿರಲಿಲ್ಲ. ಗದ್ದೆ ಹದ ಮಾಡುವುದರಿಂದ ಹಿಡಿದು ಕಾಳು ಕಾಣಿಸಿಕೊಳ್ಳುವ ತನಕ ಜೋಪಾನ ಮಾಡಿದ ಬತ್ತ ಕೈಗೆ ದಕ್ಕುವ ಮೊದಲೇ ಅಕಾಲಿಕ ಮಳೆಯಿಂದಾಗಿ ನೆಲದ ಪಾಲಾಗಿದ್ದು ಸಂಕಷ್ಟದಲ್ಲಿರುವ ಈ ರೈತರಿಗೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ಒದಗಿಸಿೊಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.