ADVERTISEMENT

ಸಾವಯವ, ಸಿರಿಧಾನ್ಯ ಮೇಳ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 5:41 IST
Last Updated 23 ಡಿಸೆಂಬರ್ 2017, 5:41 IST

ರಾಯಚೂರು: ಉತ್ತಮ ಆರೋಗ್ಯದ ಪರಿಣಾಮಗಳನ್ನು ಹೊಂದಿರುವ ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಬಳಸುವುದಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಿಸೆಂಬರ್‌ 24 ಹಾಗೂ 25 ರಂದು ಸಾವಯವ ಮತ್ತು ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕಿರಣಕುಮಾರ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ವ್ಯಾಪ್ತಿ ಹೊಂದಿರುವ ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಗಳ ಸಹಯೋಗದಲ್ಲಿ ಮೇಳ ಏರ್ಪಡಿಸಲಾಗಿದೆ. ಮೇಳದಲ್ಲಿ 80 ಮಳಿಗೆಗಳನ್ನು ಹಾಕುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾವಯವ ಮತ್ತು ಸಿರಿಧಾನ್ಯ ಮಾರಾಟಗಾರರು, ಆಹಾರ ಪದಾರ್ಥ ತಯಾರಿಸುವವರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯುವವರು ಮತ್ತು ಸಿರಿಧಾನ್ಯಗಳ ಬಳಕೆದಾರರು ಈಚೆಗೆ ಹೆಚ್ಚಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೃಷಿ ಮೇಳ ಮುಗಿಯುತ್ತಿದ್ದಂತೆ ಸಿರಿಧಾನ್ಯ ಮೇಳ ಏರ್ಪಡಿಸಲಾಗಿದೆ. ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಮೇಳ ಉದ್ಘಾಟಿಸುವರು. ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ADVERTISEMENT

24 ರಂದು ಬೆಳಿಗ್ಗೆ 8.30 ರಿಂದ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಸಿರಿಧಾನ್ಯ ರಂಗೋಲಿ ಸ್ಪರ್ಧೆ ನಡೆಯುವುದು. ಬೆಳಿಗ್ಗೆ 11 ಕ್ಕೆ ಮೇಳದ ಉದ್ಘಾಟನಾ ಸಮಾರಂಭ. ಮಧ್ಯಾಹ್ನ 3 ರಿಂದ ಸಿರಿಧಾನ್ಯ ಮತ್ತು ಸಾವಯವ ಕುರಿತು ಕೃಷಿಕರಿಂದ ಕಿರು ಪರಿಚಯ ನಡೆಯಲಿದೆ. ಮಧ್ಯಾಹ್ನ 3 ಕ್ಕೆ ಜಿಮ್‌ಹಾಲ್‌ನಲ್ಲಿ ಸಿರಿಪಾಕ ಅಡುಗೆ ಸ್ಪರ್ಧೆ. ಸ್ಪರ್ಧಾಳುಗಳು ಮನೆಯಿಂದಲೇ ಸಿರಿಧಾನ್ಯ ಪದಾರ್ಥ ತಯಾರಿಸಿಕೊಂಡು ತೆಗೆದುಕೊಂಡು ಬರಬೇಕು. ಇದರಲ್ಲಿ ಸಿಹಿ ಮತ್ತು ಖಾರದ ಅಡುಗೆ ಎಂದು ವಿಭಾಗಿಸಲಾಗಿದೆ. ಪ್ರತಿ ವಿಭಾಗಕ್ಕೂ ಮೂರು ಬಹುಮಾನ ನೀಡಲಾಗುತ್ತದೆ. ಸಂಜೆ 5.30 ರಿಂದ ಸಾಂಸ್ಕೃತಿಕ ಸಿರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

25 ರಂದು ಬೆಳಿಗ್ಗೆ 10.30 ರಿಂದ ಮುಖ್ಯ ವೇದಿಕೆಯಲ್ಲಿ ಉಪನ್ಯಾಸ ಕಾರ್ಯಕ್ರಮ. ಬೆಂಗಳೂರಿನ ಜಯದೇವ ಆಸ್ಪತ್ರೆಯ ಡಯಟಿಷಿಯನ್‌ ಜಯಲಕ್ಷ್ಮೀ ಅವರು ಸಿರಿಧಾನ್ಯಗಳ ಸೇವನೆಯಿಂದ ಆಗುವ ಅನುಕೂಲಗಳನ್ನು ವಿವರಿಸುವರು. ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ ಬೆಳಿಗ್ಗೆ 10.30 ರಿಂದ ಚಿತ್ರಕಲಾ ಸ್ಪರ್ಧೆ ನಡೆಯುವುದು. ಮಧ್ಯಾಹ್ನ 12 ರಿಂದ ತಾರಸಿ, ಕೈತೋಟದ ಪ್ರಾತ್ಯಕ್ಷಿಕೆ, ಮಧ್ಯಾಹ್ನ 3 ಗಂಟೆಯಿಂದ ಸಿರಿಧಾನ್ಯ ಅಡುಗೆ ಪ್ರಾತ್ಯಕ್ಷಿಕೆ. ಸಂಜೆ 4 ಗಂಟೆಗೆ ಸಮಾರೋಪ ನಡೆಯುವುದು ಎಂದು ಹೇಳಿದರು. ಕೃಷಿ ಇಲಾಖೆಯ ಉಪನಿರ್ದೇಶಕ ಅಶೋಕ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಅಶೋಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.