ADVERTISEMENT

ಸಿದ್ಧಗಂಗಾ ಮಠದ ಕೊಡುಗೆ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2011, 8:25 IST
Last Updated 26 ಜೂನ್ 2011, 8:25 IST
ಸಿದ್ಧಗಂಗಾ ಮಠದ ಕೊಡುಗೆ ಶ್ಲಾಘನೀಯ
ಸಿದ್ಧಗಂಗಾ ಮಠದ ಕೊಡುಗೆ ಶ್ಲಾಘನೀಯ   

ಮಾನ್ವಿ: ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಗ್ರಾಮವನ್ನು ದತ್ತು ತೆಗೆದುಕೊಂಡು `ಆಸರೆ~ ಮನೆಗಳ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಿ ಸಹಕರಿಸಿದ ಸಿದ್ದಗಂಗಾ ಮಠದ ಸೇವೆ ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಉಮಳಿಪನ್ನೂರು ಗ್ರಾಮದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ವತಿಯಿಂದ ನಿರ್ಮಿಸಲಾದ 200 `ಆಸರೆ~ ಮನೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಭೀಕರ ನೆರಹಾವಳಿಯಿಂದ ಉತ್ತರ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿಸಿದ ಸಂದರ್ಭದಲ್ಲಿ ನಾಡಿನ ಮಠಾಧೀಶರು, ಸಂಘ ಸಂಸ್ಥೆಗಳು ಮುಖಂಡರು ರಾಜ್ಯ ಸರ್ಕಾರದ ನೆರವಿಗೆ ಧಾವಿಸಿದ್ದಾರೆ. ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಯವರು ಹೆಚ್ಚಿನ ಆಸಕ್ತಿ ವಹಿಸಿ ಉಮಳಿಪನ್ನೂರು ಗ್ರಾಮದಲ್ಲಿ ಸುಂದರ ನವಗ್ರಾಮ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
 
`ಆಸರೆ~ ಮನೆಗಳ ಫಲಾನುಭವಿಗಳು ತಮ್ಮ ಪ್ರತಿ ಮನೆಯಲ್ಲಿ ಶಿವಕುಮಾರ ಸ್ವಾಮಿಗಳ ಭಾವಚಿತ್ರ ಹಾಕಬೇಕು. ಭಾವಚಿತ್ರಗಳನ್ನು ನಾನೇ ಸ್ವಂತ ಖರ್ಚಿನಲ್ಲಿ ಕಳಿಸಿಕೊಡುತ್ತೇನೆ. ಶಿವಕುಮಾರ ಸ್ವಾಮೀಜಿಯವರ ಅಭಿಲಾಷೆಯಂತೆ ನಿರ್ಮಾಣಗೊಂಡಿರುವ ಈ ನವಗ್ರಾಮಕ್ಕೆ `ಶ್ರೀಶಿವಕುಮಾರ ಸ್ವಾಮಿ ನಗರ~ ಎಂದು ನಾಮಕರಣ ಮಾಡಲಾಗುವುದು.

`ಶ್ರಿ ಶಿವಕುಮಾರ ನಗರದಲ್ಲಿ ಸುಂದರ ಉದ್ಯಾನ ಹಾಗೂ ಶಾಲಾ ಕಟ್ಟಡ ನಿರ್ಮಿಸಿ ಮಾದರಿ ನಗರವನ್ನಾಗಿ ಮಾಡಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ  ಘೋಷಿಸಿದರು.

ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ರಾಜ್ಯವನ್ನು ಆರ್ಥಿಕವಾಗಿ ಮತ್ತು ಶೈ ಕ್ಷಣಿಕವಾಗಿ ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ವಲಯವನ್ನು ನಿರ್ಲಕ್ಷಿಸಲಾಗುತ್ತಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲ ಎಂದು ದೂರಿದ ಯಡಿಯೂರಪ್ಪ  ರಾಜ್ಯ ಸರ್ಕಾರಕ್ಕೆ ಏಷ್ಟೇ ಸಂಕಷ್ಟಗಳು ಬಂದರೂ ಇನ್ನೂ ಎರಡು ವರ್ಷ ನಾನೇ ಗಟ್ಟಿಯಾಗಿರುವೆ.

ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುವವರೆಗೆ ವಿರಮಿಸುವುದಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದರು.ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ಆದರೆ ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಗೆ ರಾಜ್ಯಕ್ಕೆ ಕಲಿದ್ದಲು ಪೂರೈಕೆ ಮಾಡುತ್ತಿಲ್ಲ. ಕಾರಣ ವಿದೇಶದಿಂದ ಕಲ್ಲಿದ್ದಲು ಖರೀದಿಸಿ ರಾಜ್ಯದಲ್ಲಿಯೇ ವಿದ್ಯುತ್ ಉತ್ಪಾದನೆಗೆ ಉದ್ದೇಶಿಸಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಸಿದ್ದಲಿಂಗ ಸ್ವಾಮಿಗಳನ್ನು ಸನ್ಮಾನಿಸಿದರು.

ಸಂಸದ ಸಣ್ಣಪಕ್ಕೀರಪ್ಪ, ಶಾಸಕರಾದ ರಾಜಾ ರಾಯಪ್ಪ ನಾಯಕ ಹಾಗೂ ಹಂಪಯ್ಯ ನಾಯಕ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ರಾಜ್ಯ ಖಾದಿ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪಂಪನಗೌಡ ನೀರಮಾನ್ವಿ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ, ತಹಸೀಲ್ದಾರ್ ಸೋಮಲಿಂಗ ಜಿ.ಗೆಣ್ಣೂರು ವೇದಿಕೆಯಲ್ಲಿದ್ದರು. ಪ್ರಭಾರ ಸಹಾಯಕ ಆಯುಕ್ತ ಡಾ.ಮಧುಕೇಶ್ವರ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.