ರಾಯಚೂರು: ಮಾನ್ವಿ ತಾಲ್ಲೂಕಿನಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಎರಡನೇ ಹಂತದ ಕಾಮಗಾರಿಯನ್ನು ತನಿಖೆಗೆ ನಡೆಸಿ ಸಂಬಂಧಪಟ್ಟ ಕಿರಿಯ ಎಂಜಿನಿಯರ್ನ್ನು ಅಮಾನತ್ತುಗೊಳಿಸಬೇಕು ಎಂದು ಕರ್ನಾಟಕ ಜನಜಾಗೃತಿ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಮಾನ್ವಿ ತಾಲ್ಲೂಕಿನಲ್ಲಿ ಭೂ ಸೇನೆ ನಿಗಮದವತಿಯಿಂದ ಕೈಗೊಂಡಿರುವ ಸುವರ್ಣ ಗ್ರಾಮ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಿರ್ವಹಿಸಲಾಗಿದೆ ಎಂದು ಆಪಾದಿಸಿದರು.
ಈ ಕಾಮಗಾರಿಗೆ ಸಂಬಂಧಿಸಿದ ಕಿರಿಯ ಎಂಜಿನಿಯರ್ಗಳು ಅಂದಾಜು ಪತ್ರಿಕೆ ಪ್ರಕಾರ ನಿರ್ವಹಿಸದೇ ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ ಕೈಗೊಂಡಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ವಹಿಸಿದ ಕಾಮಗಾರಿಗಯನ್ನು ಗ್ರಾಮ ಪಂಚಾಯಿತಿಯವತಿಯಿಂದ ಕೈಗೊಂಡ ಕಾಮಗಾರಿಯ ಚಿತ್ರವನ್ನು ಸಲ್ಲಿಸಿ ಬಿಲ್ ಪಡೆಯಲಾಗಿದೆ ಎಂದು ಆರೋಪಿಸಿದರು.
ಸುವರ್ಣ ಗ್ರಾಮ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕುರಿತು ತನಿಖೆ ನಡೆಸಬೇಕು, ಸಂಬಂಧಪಟ್ಟ ಕಿರಿಯ ಎಂಜಿನಿಯರ್ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ನಕ್ಕುಂದಿ ಅವರು ನಿಗಮದ ಉಪನಿರ್ದೇಶಕರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಅಬ್ರಾಹಂ ಜಾಗೀರ ಪನ್ನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಲಿಂಗಣ್ಣ ಮಾಡಗಿರಿ, ತಾಲ್ಲೂಕು ಅಧ್ಯಕ್ಷ ಯಲ್ಲಪ್ಪ ಬಾದರದಿನ್ನಿ, ಕಾರ್ಯಾಧ್ಯಕ್ಷ ಮುತ್ತಣ್ಣ ಚಾಗಬಾವಿ, ಉಪಾಧ್ಯಕ್ಷ ಮುಕ್ಕಣ್ಣ ಬಲ್ಲಟಗಿ, ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಪೋತ್ನಾಳ, ಖಜಾಂಚಿ ರಾಜೇಂದ್ರ ಕಲ್ಲೂರು, ಸಂಘಟನಾ ಕಾರ್ಯದರ್ಶಿ ರವಿ ಕುರ್ಡಿ, ನಾಗೇಂದ್ರ ಹೊಕ್ರಾಣಿ, ರಾಜಕುಮಾರ ಕುರ್ಡಿ, ಕುಮಾರ ಚಾಗಬಾವಿ, ಅಮರೇಶ ಕೆ.ಗುಡದಿನ್ನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.