ADVERTISEMENT

ಸ್ಕೌಟ್ಸ್ ಮತ್ತು ಗೈಡ್ಸ್ ದೇಶದ ಆಸ್ತಿ: ಮೇಟಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 7:25 IST
Last Updated 15 ಮಾರ್ಚ್ 2011, 7:25 IST

ಲಿಂಗಸುಗೂರ: ಪ್ರಾಥಮಿಕ ಮತ್ತು ಪ್ರೌಢ ಹಂತದ ಕಿರಿಯ ಮಕ್ಕಳು ಸಮುದಾಯದ ಶಕ್ತಿಯಾಗಿವೆ. ಅಂತಹ ಸಾಮರ್ಥ್ಯವುಳ್ಳ ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಸ್ತು, ಸಂಘಟನೆ, ಸೇವೆಯ ಸ್ವರೂಪ ಕಲಿಸಿಕೊಡುವುದರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ದೇಶದ ಆಸ್ತಿಯಾಗಬಲ್ಲರು. ಅಂತಹ ಶಕ್ತಿಯಿಂದ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆ ಅಧ್ಯಕ್ಷ ಅಮರಗುಂಡಪ್ಪ ಮೇಟಿ ಅಭಿಮಾನದ ಮಾತು ಹೇಳಿದರು.

ಭಾನುವಾರ ರಾಯಚೂರು ಜಿಲ್ಲಾ ಮಟ್ಟದ ರ್ಯಾಲಿ-2011ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಣವಂತರಾದ ನಾವುಗಳು ಪ್ರಾಮಾಣಿಕತೆ, ಸಹಕಾರ, ಪ್ರೀತಿ, ವಿಶ್ವಾಸದ ಜೊತೆಗೆ ಸುತ್ತಮುತ್ತಲಿನ ಜನತೆ ಮತ್ತು ಪರಿಸರ ಸಂರಕ್ಷಣೆಗೆ ಮುಂದಾದಲ್ಲಿ ಸಮಾಜಕ್ಕೆ ನೀಡುವ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ಚಳವಳಿಯ ಮೂಲ ಉದ್ದೇಶವನ್ನು ಅರಿತು ಜೀವನದುದ್ದಕ್ಕೂ ನಡೆದುಕೊಳ್ಳುವಂತೆ ಕೋರಿದರು.

ಸಾನಿಧ್ಯ ವಹಿಸಿದ್ದ ಸಿದ್ಧಲಿಂಗಸ್ವಾಮಿಗಳು, ಮುಖಂಡರಾದ ಬಸವಂತರಾಯ ಕುರಿ, ಕೆ.ತಿಮ್ಮಯ್ಯ, ಮಹಾದೇವಪ್ಪಗೌಡ ಮಸ್ಕಿ, ಪಾಮಯ್ಯ ಮುರಾರಿ, ಜಿವಿ ಕೆಂಚನಗುಡ್ಡ, ವೆಂಕಟೇಶ ಗುಡಾಳ ಮಾತನಾಡಿ, ಯಾವುದೇ ಒಂದು ವಿಷಯದ ಮೂಲ ಅರಿತು ಹೆಜ್ಜೆ ಹಾಕಬೇಕು. ಯುವಕರು ದುಶ್ಚಟಗಳಿಂದ ಮುಕ್ತರಾದರೆ ಸ್ವಾವಲಂಬಿ ಬದುಕುಕಟ್ಟಿಕೊಳ್ಳಬಹುದು. ಈ ಶಿಬಿರ ಇತರೆ ವಿದ್ಯಾರ್ಥಿಗಳಿಗೂ ಮಾರ್ಗದರ್ಶಕವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲಿ ಜಯಗಳಿಸಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಬಿರದ ಯಶಸ್ಸಿಗೆ ಸಹಾಯ, ಸಹಕಾರ ನೀಡಿದ ಗಣ್ಯಮಾನ್ಯರನ್ನು ಸತ್ಕರಿಸಲಾಯಿತು. ವೈವಿಧ್ಯಮಯ ಸಾಹಸ ಪ್ರದರ್ಶನಗಳನ್ನು ಶಿಬಿರದುದ್ದಕ್ಕೂ ಮಕ್ಕಳು ನಡೆಸಿಕೊಟ್ಟು ಸಾಹಸ ಮೆರೆದರು. ಕೆಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡು ಶಿಬಿರದ ಮಹತ್ವ ಮತ್ತು ಆಯೋಜಕರ ಪರಿಶ್ರಮ ಕೊಂಡಾಡಿದರು.

ಈ ಸಂದರ್ಭದಲ್ಲಿ ಡಾ.ಶಿವಶರಣಪ್ಪ ಇತ್ಲಿ, ಭೂಪನಗೌಡ ಕರಡಕಲ್ಲ, ಬಸವರಾಜ ಐದನಾಳ, ಸೋಮಶೇಖರ ಐದನಾಳ, ಗುಂಡಪ್ಪ ನಾಯಕ, ಎಚ್.ಬಿ. ಮುರಾರಿ, ರಮೇಶ ಜೋಷಿ, ಮಲ್ಲಣ್ಣ ವಾರದ, ಬಸವರಾಜ ಮೂಲಿಮನಿ, ಮಹಾಲಿಂಗಪ್ಪ, ಚಂದನಗೌಡ ಹೊನ್ನಳ್ಳಿ, ಬಸವರಾಜ ನೀರಲಕೇರಿ, ಗುರುಸಂಗಯ್ಯ ಗಣಾಚಾರಿ, ಮಲ್ಲಿಕಾರ್ಜುನ ಮೇಲ್ಮನಿ, ಅಕ್ಕಮಹಾದೇವಿ, ಮುರಳಿ ಕುಲಕರ್ಣಿ, ಟಿ.ಎಸ್. ಕುಮಾರಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.