ADVERTISEMENT

ಹಾರ್ವೆಸ್ಟರ್ ಮಾರಾಟ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:30 IST
Last Updated 6 ಜುಲೈ 2012, 9:30 IST

ಸಿಂಧನೂರು: ಜಿಲ್ಲೆಯ ಸುಮಾರು 22ಜನ ರೈತರಿಗೆ ಕಳಪೆ ಹಾರ್ವೆಸ್ಟರ್‌ಗಳನ್ನು ಅಧಿಕ ಬೆಲೆಗೆ ಅಧಿಕ ಬೆಲೆಗೆ ಮಾರಾಟ ಮಾಡಿ ತಲಾ 3ಲಕ್ಷ ರೂ. ವಂಚನೆ ಮಾಡಿದ ಸ್ಥಳೀಯ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಹಾರ್ವೆಸ್ಟರ್ ಅಧಿಕೃತ ಮಾರಾಟಗಾರರಾದ ಜೈಕಿಸಾನ್ ಮೋಟಾರ್ಸ್‌ನವರ ವಿರುದ್ಧ ಕ್ರಮಕ್ಕೆ ಸಹಾಯಕ ಕೃಷಿ ನಿರ್ದೇಶಕ ಮರಿಬಸನಗೌಡ ಜಂಟಿ ಕೃಷಿ ನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ.

ಬ್ಯಾನ್ ಆಗಿರುವ ಸ್ವರಾಜ್ ಕಂಪನಿಯ ಹಾರ್ವೆಸ್ಟರ್‌ಗಳಿಗೆ ಡಬಲ್ ಪೇಂಟಿಂಗ್ ಮಾಡಿ ಮಹೀಂದ್ರಾ ಕಂಪನಿಯ ಲೇಬಲ್ ಹಾಕಿ ನಿಗದಿತ ಬೆಲೆಗಿಂತ 2.5ಲಕ್ಷ ಅಧಿಕ ಬೆಲೆಗೆ ಜೈಕಿಸಾನ್ ಮೋಟಾರ್ಸ್‌ನ ವಿತರಕ ಲಕ್ಷ್ಮಣರಾವ್ ರೈತರಿಗೆ ಮಾರಾಟ ಮಾಡಿದ್ದಾರೆ. ಇವು ಇತರೆ ಹಾರ್ವೆಸ್ಟರ್‌ಗಳಿಂತ 20ಕ್ವಿಂಟಾಲ್ ಅಧಿಕ ತೂಕವನ್ನು ಹೊಂದಿರುವುದರಿಂದ ಗದ್ದೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವೇಗವಾಗಿ ಚಲಿಸಿದಾಗ ಅದರ ಬಿಡಿಭಾಗಗಳು ಕಳಚಿ ಬೀಳುತ್ತವೆ.
 
ರೈತರು ಇದಕ್ಕೆ ಪ್ರತಿ ಗಂಟೆಗೆ 7ರಿಂದ 8ಲೀಟರ್ ಅಧಿಕ ಡಿಸೇಲ್ ವ್ಯಯಿಸಬೇಕಾಗಿದೆ. ಹೊಸ ತಂತ್ರಜ್ಞಾನ ಇಲ್ಲದ್ದರಿಂದ ಬಾಗಿತ ಬತ್ತದ ತೆನೆಗಳು ಹಾಗೆ ಉಳಿಯುತ್ತಿವೆ. ಇಷ್ಟೆಲ್ಲ ಸಮಸ್ಯೆಗಳಿರುವ ಈ ಕಳಪೆ ಹಾರ್ವೆಸ್ಟರ್‌ಗಳನ್ನು ಬಳಸುವುದರಿಂದ ರೈತರು ನಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರಿಗೆ ಹಾವೆಸ್ಟರ್ ಮಾರಾಟ ಮಾಡಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ರೈತರಿಗಾಗಿ ನಷ್ಟವನ್ನು ವಂಚಕರಿಂದ ಹಿಂದಿರುಗಿಸಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.