ರಾಯಚೂರು: ಮಂಗಳವಾರ ಬೆಂಗಳೂರಲ್ಲಿ ನಿಧನರಾದ ನಾಡಿನ ಹಿರಿಯ ಪತ್ರಕರ್ತ ವಿ.ಎನ್ ಸುಬ್ಬರಾವ್ ಅವರಿಗೆ ಇಲ್ಲಿನ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಸಭಾಭವನದಲ್ಲಿ ಬುಧವಾರ ನಗರದ ಪತ್ರಕರ್ತರು ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಬಿ ವೆಂಕಟಸಿಂಗ್ ಮಾತನಾಡಿ, ಬುದ್ಧಿವಂತಿಕೆ, ಚಾಣಾಕ್ಷತೆಗೆ ವಿ.ಎನ್ ಸುಬ್ಬರಾವ್ ಹೆಸರಾಗಿದ್ದರು. ವೈಯಕ್ತಿಕ ವರ್ಚಸ್ಸಿನಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಮಹತ್ವದ ಕೆಲಸ ಮಾಡಿದರು. ಹೈದರಾಬಾದ್ ಕರ್ನಾಟಕ ಪ್ರದೇಶದ 8 ಜನ ಪತ್ರಕರ್ತರಿಗೆ ಆಕಡೆಮಿಯಿಂದ ಪ್ರಶಸ್ತಿ ದೊರಕಿಸಿದರು. ಪತ್ರಿಕಾ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರು ಯುವ ಪತ್ರಕರ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ವಿ.ಎನ್ ಸುಬ್ಬರಾವ್ ಅವರಿಗೆ ರಾಜ್ಯ ಸರ್ಕಾರವು ಮರಣೋತ್ತರವಾಗಿ ಟಿಎಸ್ಆರ್ ಪ್ರಶಸ್ತಿ ದೊರಕಿಸುವ ಮೂಲಕ ಆಶಯ ಪೂರೈಸಬೇಕು.
ಸುಬ್ಬರಾವ್ ನಿಧನದಿಂದ ಮಾಧ್ಯಮ ಕ್ಷೇತ್ರದ ರತ್ನ ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಕಾರ್ಯದರ್ಶಿ ಜಯರಾಮ, ಹಿರಿಯ ಪತ್ರಕರ್ತ ಮೃತ್ಯುಂಜಯ ಕಪಗಲ್, ವೀರನಗೌಡ, ಜಗನ್ನಾಥ ದೇಸಾಯಿ, ಭೀಮರಾಯ ಹದ್ದಿನಾಳ, ದತ್ತು ಸರ್ಕಿಲ್, ಬಸವರಾಜ ನಾಗಡದಿನ್ನಿ, ವಿಜಯ, ಅಶೋಕ ನೇಮಕರ್, ಗುರುನಾಥ, ಪಾಷಾ, ಶಿವಮೂರ್ತಿ, ಖಾನ್, ವೆಂಕಟೇಶ, ಪತ್ರಿಕಾ ಛಾಯಾಗ್ರಾಹಕರಾದ ಶ್ರೀನಿವಾಸ ಇನಾಂದಾರ, ಮಲ್ಲಿಕಾರ್ಜುನ ಸ್ವಾಮಿ, ಶ್ರೀನಿವಾಸ ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.