ಲಿಂಗಸುಗೂರ: ಕಳೆದ ಒಂದು ವಾರದ ಹಿಂದೆ ಸ್ಥಳೀಯ ಜಿಟಿಸಿಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ವಿಷಯಕ್ಕೆ ಸಂಬಂಧಿಸಿ ಸಂಬಂಧಿಸಿದ ಸಚಿವ ರಾಜೂಗೌಡ ಭೇಟಿ ನೀಡಿದ್ದರು. ಸಚಿವರು ವಿದ್ಯಾರ್ಥಿಗಳಿಗೆ ನೀಡಿದ ಭರವಸೆ ಹುಸಿಯಾಗಿದ್ದು ಪುನಃ ಕಿರುಕುಳ ಆರಂಭಗೊಂಡಿದೆ.
ಪ್ರಾಚಾರ್ಯರು ಮತ್ತು ಉಪನ್ಯಾಸಕ ಸಿಬ್ಬಂದಿ ವರ್ಗಾವಣೆ ಮಾಡುವವರೆಗೆ ತರಗತಿಗೆ ಬಹಿಷ್ಕಾರ ಹಾಕುವುದಾಗಿ ವಿದ್ಯಾರ್ಥಿ ಸಮೂಹ ಬುಧವಾರ ತರಗತಿ ಬಹಿಷ್ಕರಿಸಿ ಹೊರ ನಡೆದ ಪ್ರಸಂಗ ಜರುಗಿತು.
ಆತ್ಮಹತ್ಯಗೆ ಕಾರಣ ಏನೆ ಇರಲಿ. ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಆಂತರಿಕ ಅಂಕಗಳ ಭಯದಲ್ಲಿ ನಿತ್ಯ ಶಿಕ್ಷಣ ಪಡೆಯುವಂತಾಗಿದೆ. ಪ್ರಾಚಾರ್ಯರ ದ್ವಂದ್ವ ನೀತಿ, ಉಪನ್ಯಾಸಕರ ಕಿರುಕುಳದಿಂದ ಬೇಸತ್ತು ಹೋಗಿದ್ದೇವೆ. ಈ ಕುರಿತು ಸಚಿವರು ಪ್ರಾಚಾರ್ಯರನ್ನು ಕೂಡಲೆ ವರ್ಗ ಮಾಡುವುದಾಗಿ ಸುಳ್ಳು ಭರವಸೆ ನೀಡಿದ್ದಾರೆ. ಕೂಲಂಕುಷ ತನಿಖೆ ನಡೆಸಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಹುಸಿಯಾಗಿದ್ದರಿಂದ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿದರು.
ಸಚಿವರು ಮತ್ತು ಶಾಸಕರ ಸೂಚನೆಯಂತೆ ವಿದ್ಯಾರ್ಥಿ ಸಮೂಹದ ಮಾಹಿತಿ ಸಂಗ್ರಹಿಸುವಲ್ಲಿ ತನಿಖಾ ತಂಡ ವಿಫಲವಾಗಿದೆ.
ಸಂಕಷ್ಟ ಮತ್ತು ದಬ್ಬಾಳಿಕೆಯಲ್ಲಿ ಶಿಕ್ಷಣ ಪಡೆಯುವುದಕ್ಕಿಂತ ಶಾಲೆಯಿಂದ ಹೊರಗುಳಿಯುವುದೆ ಹೆಚ್ಚು ವಾಸಿ ಎಂದುಕೊಂಡು ವಿದ್ಯಾರ್ಥಿಗಳು ಬುಧವಾರ ತರಗತಿಗಳಿಗೆ ಬಹಿಷ್ಕಾರ ಹಾಕಿ ಹೊರನಡೆದ ಪ್ರಸಂಗ ಜರುಗಿತು. ನಾಯಕತ್ವದ ಹೆಸರು ಹೇಳುವಂತೆ ಪ್ರಜಾವಾಣಿ ಕೇಳಿದಾಗ ವಿದ್ಯಾರ್ಥಿ ಸಮೂಹ ಎಂದು ಬರೆದು ತಮ್ಮನ್ನು ಕಾಪಾಡುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.