ADVERTISEMENT

ಹೈ.ಕ ಅಭಿವೃದ್ಧಿಗೆ ಪ್ರತ್ಯೇಕ ಟಾಸ್ಕ್‌ಫೋರ್ಸ್‌ ಅಗತ್ಯ: ಸಿ.ಟಿ ರವಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 6:17 IST
Last Updated 16 ಡಿಸೆಂಬರ್ 2017, 6:17 IST

ಲಿಂಗಸುಗೂರು: ‘ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಪ್ರೊ. ನಂಜುಂಡಪ್ಪ ವರದಿ ಯಥಾವತ್ತಾಗಿ ಅನುಷ್ಠಾನಗೊಳಿಸಲು ರಚನೆಗೊಂಡಿರುವ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿರ್ವಹಣೆಗೆ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರತ್ಯೇಕ ಟಾಸ್ಕ್‌ಫೋರ್ಸ್‌ ರಚಿಸುವ ಅಗತ್ಯ ಇದೆ’ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡುತ್ತಿರುವ ಅನುದಾನ, ಅದರ ಲೆಕ್ಕಪತ್ರದ ಸಮಗ್ರ ಮಾಹಿತಿ ಆಯುಕ್ತರ ಬಳಿ ಲಭ್ಯವಿಲ್ಲದಿರುವುದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದೆ. ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿದೆ ಎಂಬುದಕ್ಕೆ ಪ್ರವಾಸಿ ಮಂದಿರದಲ್ಲಿ ನಿರ್ಮಾಣಗೊಂಡ ವಾಹುವಿಹಾರ ಟ್ರ್ಯಾಕ್‌ ನಿದರ್ಶನ’ ಎಂದರು.

‘ಗುಜರಾರ್‌ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯ ಮತಗಟ್ಟೆ ಸಮೀಕ್ಷೆ ಗಮನಿಸಿದರೆ ದೇಶದೆಲ್ಲೆಡೆ ಪ್ರಾದೇಶಿಕ ಪಕ್ಷಗಳು ಹಾಗೂ ವಂಶಾಡಳಿತ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸುತ್ತಿರುವುದು ಸ್ಪಷ್ಟವಾಗಿದೆ. ಪ್ರಜಾತಂತ್ರ ಆಡಳಿತ ವ್ಯವಸ್ಥೆ ಒಳಗೊಂಡಿರುವ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ದುರಹಂಕಾರಿ ಸಿದ್ದರಾಮಯ್ಯ ಅವರ ಆಡಳಿತ ಕೊನೆಗೊಳ್ಳುವ ಕಾಲ ಸನ್ನಿಹಿತಾವಗಿದೆ’ ಎಂದರು.

ADVERTISEMENT

‘ರಾಜ್ಯದ ಬಹುತೇಕ ಕಡೆಗಳಲ್ಲಿ ಹಿಂದೂ ಯುವಕರ ಕೊಲೆಗಳಾಗುತ್ತಿವೆ. ಲಿಂಗಸುಗೂರಿನಲ್ಲಿ ಹಿಂದೂ ಯುವಕನ ಹತ್ಯೆ ನಡೆದಿದ್ದು, ಕಾಂಗ್ರೆಸ್‌ ಸರ್ಕಾರ ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದೆ. ಇಂತಹ ಅನೇಕ ಪ್ರಕರಣಗಳು ಈ ಭಾಗದಲ್ಲಿ ಬೆಳಕಿಗೆ ಬಂದಿಲ್ಲ’ ಎಂದು ಹೇಳಿದರು.

‘ಪರಿವರ್ತನಾ ಯಾತ್ರೆ ನಂತರ ರಾಜ್ಯದಲ್ಲಿ ಭಾರೀ ಪ್ರಮಾಣದ ರಾಜಕೀಯ ಬದಲಾವಣೆ ಆಗಲಿದೆ’ ಎಂದರು. ಕೆ.ಬಿ ಶ್ರೀನಿವಾಸ, ಮಂಡಲ ಅಧ್ಯಕ್ಷ ದೊಡ್ಡನಗೌಡ ಹೊಸಮನಿ, ಮುಖಂಡರಾದ ಹನುಮೇಶ ಸರಾಫ್‌, ಪ್ರಭು ಹವಾಲ್ದಾರ, ಸಿದ್ದು ಬಡಿಗೇರ, ವಿಶ್ವನಾಥ ಆನ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.