ದೇವದುರ್ಗ/ಲಿಂಗಸುಗೂರು: ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ 9 ತಿಂಗಳ ಸರ್ಕಾರದ ಅವಧಿಯಲ್ಲಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪಡಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ನುಡಿದಂತೆ ನಡೆದಿದೆ ಎಂದು ಕೆಪಿಸಿಸಿ ರಾಜ್ಯ ಘಟಕ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೇಳಿದರು.
ಶುಕ್ರವಾರ ದೇವದುರ್ಗ ಹಾಗೂ ಲಿಂಗಸುಗೂರು ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಖಾತರಿ ಯೋಜನೆ, ಶಿಕ್ಷಣ ಹಕ್ಕು ಕಾಯ್ದೆ, ಜೆ–ನರ್ಮ್, ಅಕ್ಷರ ದಾಸೋಹ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಆಹಾರ ಭದ್ರತಾ ಕಾಯ್ದೆ, ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ, ಅರಣ್ಯ ವಾಸಿಗಳ ಹಕ್ಕು ರಕ್ಷಣಾ ಕಾಯ್ದೆ ಸೇರಿದಂತೆ ಇತರೆ ಯೋಜನೆಗಳನ್ನು ನೀಡಿದೆ ಎಂದರು.
ಬೀದಿ ವ್ಯಾಪಾರಿಗಳ ಹಕ್ಕು ರಕ್ಷಣಾ ಕಾಯ್ದೆ, ಲೋಕಪಾಲ ಮಸೂದೆ, ರೈಲ್ವೆ ಯೋಜನೆಗಳು, ರೈತರಿಗೆ ಸಾಲ ಮನ್ನಾ ಯೋಜನೆ ಅಸಂಘಟಿತ ಕಾರ್ಮಿಕರಿಗೆ ವಿಮಾ ಸೌಲಭ್ಯದಂತಹ ಮಹತ್ವದ ಕಾರ್ಯಕ್ರಮ ನೀಡಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹಧನ, ಮನಸ್ವಿನಿ ಯೋಜನೆ, ಪರಿಶಿಷ್ಟಜಾತಿ ಪಂಗಡದವರಿಗೆ ಸಾಲ ಮನ್ನಾ ಯೋಜನೆ, ರೈತರಿಗೆ ಬಡ್ಡಿ ರಹಿತ ಸಾಲ, ಯಶಸ್ವಿನಿ ವಿಸ್ತರಣೆ, ಶುದ್ಧ ಕುರಿಯುವ ನೀರಿನ ಘಟಕಗಳ ಸ್ಥಾಪನೆ, ಗುಡಿಸಲು ಮುಕ್ತ ಸಮಾಜದ ಕನಸಿನ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಬೆಂಬಲ ನೀಡದೆ ಹೋಗಿದ್ದರೆ ದೇವೇಗೌಡರು ದೇಶದ ಪ್ರಧಾನಿಯಾಗುತ್ತಿರಲಿಲ್ಲ. ಅದನ್ನು ಅವರು ಮರೆಯಬಾರದು. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಪಕ್ಷಕ್ಕೆ ಹೈದರಾಬಾದ್ ಕರ್ನಾಟಕದ ಜನರ ಬೇಡಿಕೆಯಾಗಿದ್ದ ಕಲಂ 371 ತಿದ್ದುಪಡಿಗೆ ಏಕೆ ಮನಸ್ಸು ಮಾಡಲಿಲ್ಲ ಎಂದು ಪ್ರಶ್ನಿಸಿದರು, ಕಾಂಗ್ರೆಸ್ ಪಕ್ಷ ಇದನ್ನು ಮಾಡಿ ತೋರಿಸಿದ್ದು, ಈ ಭಾಗದ ಅಭಿವೃದ್ಧಿಗಾಗಿ ಸುಮಾರು ₨ 750ಕೋಟಿ ವಿಶೇಷ ಅನುದಾನ ನೀಡಲಾಗಿದೆ ಎಂದರು.
ಪಾದಯಾತ್ರೆ: ಪಟ್ಟಣದ ಗೌರಂಪೇಟೆ ವಾರ್ಡ್ನ ವಾಲ್ಮೀಕಿ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಸಾರ್ವಜನಿಕ ಕ್ಲಬ್ನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ಎ.ಬಿ.ಮಾಲಕರೆಡ್ಡಿ, ಎ. ವೆಂಕಟೇಶ ನಾಯಕ ಮತ್ತು ಮಾಜಿ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಭೂಪತಿ ಮಾತನಾಡಿದರು. ಜಿಲ್ಲಾ ಘಟಕ ಅಧ್ಯಕ್ಷ ಎ. ವಸಂತಕುಮಾರ, ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕ, ಶಾಸಕ ಪ್ರತಾಪಗೌಡ ಪಾಟೀಲ, ಮಾಜಿ ಶಾಸಕರಾದ ರಾಜಾ ರಾಯಪ್ಪ ನಾಯಕ, ಬಸವರಾಜ ಪಾಟೀಲ ಇಟಿಗಿ, ಪಾರಸಮಲ ಸುಖಾಣಿ, ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಶೇಖರ ನಾಯಕ, ಎ.ಮಲ್ಲಿಕಾರ್ಜುನ ಪಾಟೀಲ, ಅಮರೇಗೌಡ ಹಂಚಿನಾಳ,
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ಕಲ್ಮಲ, ಸದಸ್ಯ ಶಿವಣ್ಣತಾತ, ಕಾಂಗ್ರೆಸ್ ಸೇವಾದಳ ಜಿಲ್ಲಾ ಘಟಕ ಅಧ್ಯಕ್ಷ ಬಾಪೂಗೌಡ ಪಾಟೀಲ, ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ಅಕ್ಕಮಾದೇವಿ ರವಿರಾಜ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮನಗೌಡ, ಬಸಯ್ಯ ಶಾಖೆ, ಮಹಿಳಾ ಘಟಕ ತಾಲ್ಲೂಕು ಅಧ್ಯಕ್ಷೆ ಕರೆಮ್ಮ ಗೋಪಾಲಕೃಷ್ಣ, ವಿವಿಧ ಬ್ಲಾಕ್ಗಳ ಅಧ್ಯಕ್ಷರಾದ ಭೂಪನಗೌಡ ಕರಡಕಲ್ಲ, ವಿಜಯಲಕ್ಷ್ಮಿ, ಭೂಪತಿ, ಮುನ್ವರ್ಖಾನ್, ಡಾ. ನಾರಾಯಣಿ, ಪರಶುರಾಮ ನಗನೂರು, ಆನಂದ ಜಲದುರ್ಗ, ರವಿ ಪಾಟೀಲ, ಮರಿಗೌಡ್ರು ಯಾದಗಿರಿ ಮತ್ತಿತರರು ಉಪಸ್ಥಿತರಿದ್ದರು.
‘ಮಾಧ್ಯಮಗಳಿಗೆ ಮೋದಿ ಮೇಲೆ ಪ್ರೀತಿ’
ಲಿಂಗಸುಗೂರು: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ನರೇಂದ್ರ ಮೋದಿ ಬಗ್ಗೆ ವ್ಯಾಮೋಹ ಹೊಂದಿವೆ. ಆದಾಗ್ಯೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಅಧಿಕಾರಕ್ಕೆ ಬಂದು 9ತಿಂಗಳಲ್ಲಿಯೇ ಹಲವು ಜನಪರವಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.
ಗುಂಪುಗಾರಿಕೆ ಇಲ್ಲ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಎಲ್ಲರೂ ಒಂದಾಗಿದ್ದೇವೆ. ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸು ಸಹಿಸದ ವ್ಯಕ್ತಿಗಳು ಗುಂಪುಗಾರಿಕೆ ಸುದ್ದಿ ಹರಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.