ADVERTISEMENT

‘ಖಾತರಿ ಅರ್ಜಿ ಸ್ವೀಕಾರ ನಿರ್ಲಕ್ಷ್ಯ ಸಲ್ಲದು’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 7:09 IST
Last Updated 20 ಡಿಸೆಂಬರ್ 2013, 7:09 IST

ರಾಯಚೂರು: ಉದ್ಯೋಗ ಖಾತರಿ ಸಂಬಂಧಿ­ಸಿದಂತೆ ಕೂಲಿಕಾರ ಬೇಡಿಕೆಗಳಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸುವಲ್ಲಿ ನಿರ್ಲಕ್ಷ್ಯ­ವಹಿಸಿ­ಬಾರದು. ಕೂಲಿಕಾರರಿಗೆ ಕೆಲಸ ನೀಡಬೇಕು. ಈ ಬಗ್ಗೆ ಗಮನಹರಿಸದೇ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳ­ಲಾಗುತ್ತದೆ ಎಂದು ಉದ್ಯೋಗ ಖಾತರಿ ಯೋಜನೆ ಆಯುಕ್ತ ಮೌನೀಶ ಮುದ್ಗೀಲ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ­ಗಳೊಂದಿಗೆ ನಡೆದ ಸಭೆಯಲ್ಲಿ ಸುದ್ದಿಗಾರ­ರೊಂದಿಗೆ ಮಾತನಾಡಿ, ಕಾಂಮಾಂಗೋ ಅಭಿಯಾನ ಯೋಜನೆ ಅಡಿ ಜಿಲ್ಲೆಯಲ್ಲಿ 50 ಸಾವಿರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 5 ಸಾವಿರ ಕುಟುಂಬಗಳಿಂದ ಅರ್ಜಿ ಸಲ್ಲಿಸಲಾಗಿದೆ. ಈ ಯೋಜನೆ ಅಡಿ ಉದ್ಯೋಗ ನೀಡದೇ ಇದ್ದರೆ, ಉಚಿತ ಕರೆ (ಟೋಲ್‌ ಫ್ರೀ) ಕೇಂದ್ರಕ್ಕೆ ದೂರು ನೀಡಿದರೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.

ಯಾವ ಗ್ರಾಮ ಪಂಚಾಯಿತಿ ಕಡಿಮೆ ಪ್ರಮಾಣದಲ್ಲಿ ಅರ್ಜಿ ಸ್ವೀಕರಿಸಿರುವುದಿಲ್ಲ ಅಂಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ಲೋಪವೆಂದು ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೂಲಿಕಾರ­ರಿಗೆ ಕೆಲಸ ನೀಡುವ ಹಾಗೂ ಅರ್ಜಿಗಳ ಸ್ವೀಕರಿಸದೇ ಇರುವುದು, ಜಾಬ್‌ ಕಾರ್ಡ್‌ ವಿತರಣೆ ಸೇರಿದಂತೆ ಲೋಪದೋಷಗಳಿವೆ. ಈ ಲೋಪದೋಷಗಳ ಬಗ್ಗೆ ಗಮನಹರಿಸಲಾಗುತ್ತದೆ ಎಂದು ತಿಳಿಸಿದರು.

ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರ ಸಂಘಟನೆ ಸಹಾಯ ಪಡೆಯಲಾಗಿದೆ. ಅರ್ಜಿ ಸ್ವೀಕರಿಸಲು ನಿರಾಕರಣೆ ಸಂಬಂಧಿಸಿದಂತೆ ಸಹಾಯವಾಣಿ ಮೂಲಕ ತಿಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ವೇತನ ಪಾವತಿಯಲ್ಲಿ ವಿಳಂಭವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತದೆ. ಕೂಲಿ ದರವನ್ನು ₨1,74ಕ್ಕೆ ನಿಗದಿಪಡಿಸಲಾಗಿದೆ. ಉದ್ಯೋಗ ಅರಿಸಿ ಗುಳೆ ಹೋಗುವವರನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು  ತಿಳಿಸಿದರು.

ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅನುದಾನ ಶೇ 6ರಷ್ಟು ಮಾತ್ರ ಇತರ ವೆಚ್ಚಗಳಿಗೆ ಖರ್ಚು ಮಾಡಬೇಕು ಎಂಬ ಸರ್ಕಾರದ ಆದೇಶವಿದೆ. ಈ ಹಿನ್ನೆಲೆಯಲ್ಲಿ ಈ ಕಾಮಗಾರಿ ಪರಿಶೀಲನೆಯನ್ನು 37 ಎಂಜಿನಿಯರ್‌ಗಳ ಮೂಲಕ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅಂಗನವಾಡಿ, ಗ್ರಾಮ ಪಂಚಾಯಿತಿ ಕಚೇರಿ ಕರವಸೂಲಿಗಾರ, ಪ್ರೇರಕರು ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವುದು ಹಾಗೂ ಅರ್ಜಿ ಪಡೆಯುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ­ನಿರ್ವಾಹಕ ಅಧಿಕಾರಿ ಡಾ.ಮುದ್ದುಮೋಹನ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಯೋಜನಾಧಿಕಾರಿ ಶರಣಬಸವ ಹಾಗೂ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.