ಮಾನ್ವಿ: ಜಾತಿ ಕಟ್ಟಳೆಯಿಲ್ಲದೆ ಸಂಗೀತ ಶಿಕ್ಷಣ ನೀಡುವ ಮೂಲಕ ಅಪಾರ ಸಂಖ್ಯೆ ಅಂಧರ ಬಾಳಿಗೆ ಬೆಳಕು ಮೂಡಿಸಿದ ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಸೇವೆ ಅನನ್ಯವಾದದ್ದು ಎಂದು ಉಪನ್ಯಾಸಕ ರೇವಣಸಿದ್ದಯ್ಯ ಹಿರೇಮಠ ಹೇಳಿದರು.
ಪಟ್ಟಣದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ‘ಪುಟ್ಟರಾಜ ಗವಾಯಿಗಳ ಬದುಕು ಮತ್ತು ಸಾಧನೆ’ ಕುರಿತು ಉಪನ್ಯಾಸ ನೀಡಿದರು.
ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ಬದುಕು ಮತ್ತು ಸಾಧನೆ ಸದಾ ಸ್ಮರಣೀಯ ಹಾಗೂ ಮಾದರಿಯಾಗಿದೆ ಎಂದು ಹೇಳಿದರು.
ಸಂಗೀತ ಕಲಾವಿದ ಅಮೃತಗೌಡ ಶಾಡಲಗೇರಿ ಅವರಿಗೆ ಸಮಿತಿಯ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ಕಾರದಿಂದ ಈಚೆಗೆ ರಾಜ್ಯ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ವಾಜೀದ್ ಸಾಜಿದ್ ಹಾಗೂ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಅಂಬಯ್ಯ ನುಲಿ ಅವರನ್ನು ಸನ್ಮಾನಿಸಲಾಯಿತು.
ಎಸ್ಎಂವಿಒ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಮಹಾಂತೇಶ ಓಲೇಕಾರ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಈ.ನರಸಿಂಹ, ಶಾಲೆಯ ಮುಖ್ಯಶಿಕ್ಷಕ ಶಂಕ್ರಪ್ಪ, ಸಂಗೀತ ಕಲಾವಿದ ಡಿ. ವೆಂಕೋಬ ಹಾಜರಿದ್ದರು.
ಸಮಿತಿ ರಾಜ್ಯ ಘಟಕದ ಸದಸ್ಯ ರಮೇಶಬಾಬು ಯಾಳಗಿ ಪ್ರಾಸ್ತಾವಿಕ ಮಾತನಾಡಿದರು. ಮೂಕಪ್ಪ ಕಟ್ಟಿಮನಿ ನಿರೂಪಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಚೆನ್ನಬಸವರಾಜ ಸ್ವಾಗತಿಸಿದರು. ಖಜಾಂಚಿ ಮಂಜುನಾಥ ಕಮತರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.