ADVERTISEMENT

‘ಬಿಜೆಪಿಯಿಂದ ದೇಶದ ಅಭಿವೃದ್ಧಿ ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:14 IST
Last Updated 22 ಮಾರ್ಚ್ 2014, 10:14 IST

ಮಸ್ಕಿ: ದೇಶದ ಅಭಿವೃದ್ಧಿ ಬಿಜೆಪಿ­ಯಿಂದ ಮಾತ್ರ ಸಾಧ್ಯ ಎಂದು ಹೇಳುವ ಬಿಜೆಪಿ ನಾಯಕರು ರಾಜ್ಯ­ದಲ್ಲಿ ತಾವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂಬುದು ರಾಜ್ಯಕ್ಕೆ ಗೊತ್ತಿದೆ. ದೇಶದ ಅಭಿವೃದ್ಧಿ ಬಿಜೆಪಿ­ಯಿಂದ ಸಾಧ್ಯ ಇಲ್ಲ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟದಲ್ಲಿ ಶುಕ್ರವಾರ ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ನರೇಂದ್ರಮೋದಿ ಈ ದೇಶದ ಪ್ರಧಾನಿಯಾದರೆ ದೇಶದ ಅಭಿವೃದ್ಧಿ ಕುಂಟಿತಗೊಳ್ಳುತ್ತದೆ. ಬಿಜೆಪಿ ಅಭಿ­ವೃದ್ಧಿಯ ನಾಟಕವಾಡುತ್ತಿದೆ. ರಾಜ್ಯ­ದಲ್ಲಿ ಬಿಜೆಪಿ ಅಧಿಕಾರ­ದಲ್ಲಿದ್ದಾಗ ಅನೇಕ ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಜೈಲು ಕಂಡಿದ್ದಾರೆ. ಇಂತಹ ಪಕ್ಷದಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಎಂದ ಅವರು 9 ತಿಂಗಳಿ­ನಿಂದ ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾದ ಅಲೆ ಇದೆ ಎಂದರು. ಹೈ–ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಸೌಲಭ್ಯ ಕಲ್ಪಿಸುವ 371 (ಜೆ) ಕಲಂ ಜಾರಿ ಕಾಂಗ್ರೆಸ್‌ ಪಕ್ಷದ ಕೊಡುಗೆ. ಈ ಭಾಗದ ಮತದಾರರು ಹೆಚ್ಚಿನ ಬಹುಮತದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಈ ಭಾಗಕ್ಕ ವಿಶೇಷ ಸ್ಥಾನಮಾನ ಕೊಟ್ಟ ಕಾಂಗ್ರೆಸ್‌ ಪಕ್ಷದ ಋಣ ಮುಟ್ಟಿಸುವ ಕಾಲ ಇದೀಗ ಬಂದಿದೆ ಎಂದರು.

ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಭಾಗದ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ದೇಶಕ್ಕೆ ರಾಹುಲ್‌ಗಾಂದಿಯಂತಹ ಯುವ ಪ್ರಧಾನಿಯ ಅವಶ್ಯಕತೆ ಇದೆ. ಮತದಾರರು ಆಸೆ, ಅಮೇಶಗಳಿಗೆ ಬಲಿಯಾಗದೇ ಉತ್ತಮ ಆಡಳಿತ­ಕ್ಕಾಗಿ ಕಾಂಗ್ರೆಸ್‌ ಬೆಂಬಲಿ­ಸುವಂತೆ ಮನವಿ ಮಾಡಿದರು.

ಕೊಪ್ಪಳ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಬಸವರಾಜಪ್ಪ ಹಿಟ್ನಾಳ, ಶಾಸಕರಾದ ಪ್ರತಾಪಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ರಾಘ­ವೇಂದ್ರ ಹಿಟ್ನಾಳ, ಮಾಜಿ ಸಚಿವ ಅಮ­ರೇ­ಗೌಡ ಪಾಟೀಲ ಬಯ್ಯಾ­ಪುರ, ಬಸವಂತರಾಯ ಕುರಿ, ಮಸ್ಕಿ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ ಮಾತನಾಡಿದರು.

ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿದ ಘಟಕಗಳ ಅಧ್ಯಕ್ಷರು ಮುಖಂಡರು ಇದ್ದರು.

‘ವೀರಶೈವರಿಗೆ ಅನ್ಯಾಯವಾಗಿಲ್ಲ’

ಮಸ್ಕಿ: ಲೋಕಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ವೀರಶೈವ ಸಮಾಜಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಸಣ್ಣ ನೀರಾ­ವರಿ ಸಚಿವ ಶಿವರಾಜ ತಂಗ­ಡಗಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಸಾಮಾಜಿಕ ನ್ಯಾಯದ ತಳಹದಿ ಮೇಲೆ ಕಾಂಗ್ರೆಸ್‌ ನಿಂತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 5 ಲೋಕಸಭಾ ಕ್ಷೇತ್ರದಲ್ಲಿ ವೀರ­ಶೈವರಿಗೆ ಟಿಕೆಟ್‌ ನೀಡಲಾಗಿದೆ ಎಂದರು. ಎಲ್ಲ ಸಮುದಾಯದವನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಕಾಂಗ್ರೆಸ್‌ ಪಕ್ಷ ಸಿದ್ಧವಿದೆ. ಆದರೆ, ಕೆಲವರು ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅಹಿಂದ ಪರವಾಗಿ­ದ್ದಾರೆಂದು ಸುದ್ದಿ ಹರಡುತ್ತಿದ್ದಾರೆ. ಇದು ಸುಳ್ಳು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT